ಮಂಜೇಶ್ವರ: ಕೂಟ ಮಹಾಜಗತ್ತು ಸಾಲಿಗ್ರಾಮದ ಮೀಯಪದವು ಅಂಗಸಂಸ್ಥೆಯ ತಿಂಗಳ ಸಭೆ ಕೇಂದ್ರ ಸಂಸ್ಥೆಯ ಜೊತೆ ಕಾರ್ಯದರ್ಶಿ ಪ್ರಕಾಶ ಹೊಳ್ಳ ಇವರ ತಲಪಾಡಿಯ ಸ್ವಗೃಹದಲ್ಲಿ ಇತ್ತೀಚೆಗೆ ಜರಗಿತು.
ಅಂಗ ಸಂಸ್ಥೆಯ ಅಧ್ಯಕ್ಷ ಸೂರ್ಯ ನಾರಾಯಣ ಮಯ್ಯರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷ ಶ್ರೀಕಾಂತ ರಾವ್ ಅವರು ಸಭಾ ಅಧ್ಯಕ್ಷತೆ ವಹಿಸಿದ್ದರು. ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ಶ್ರೀಧರ್ ರಾವ್ ಸಾಲಿಗ್ರಾಮ ದೇವಸ್ಥಾನದಲ್ಲಿ ಜರಗುವ ಋಕ್ ಸಂಹಿತಾ ಯಾಗ ಹಾಗೂ ವಾರ್ಷಿಕ ಜಾತ್ರೆಯ ಮಾಹಿತಿಯನ್ನು ನೀಡಿ ದೇವಸ್ಥಾನಕ್ಕೆ ಅಂಗ ಸಂಸ್ಥೆಯ ಎಲ್ಲ ಸದಸ್ಯರು ಭೇಟಿ ಮಾಡುವಂತೆ ವಿನಂತಿಸಿದರು. ಕೇಂದ್ರ ಸಂಸ್ಥೆಯ ಜೊತೆ ಕಾರ್ಯದರ್ಶಿ ಪ್ರಕಾಶ ಹೊಳ್ಳ ಅವರು ಬಿಲಿಯನ್ ಪೌಂಡೇಶನ್ ಸಂಸ್ಥೆಗೆ ಉದಾರವಾದ ದೇಣಿಗೆಯನ್ನು ತಮ್ಮ ಅಂಗಸಂಸ್ಥೆ ನೀಡುವಂತೆಯೂ ಮತ್ತು ಅಂಗ ಸಂಸ್ಥೆಯ ಎಲ್ಲ ಸದಸ್ಯರು ನಮ್ಮ ಮುಖವಾಣಿಯಾದ ಕೂಟಬಂಧು ಪತ್ರಿಕೆಯ ಚಂದಾದಾರರಾಗುವಂತೆ ವಿನಂತಿಸಿಕೊಂಡರು.
ಇತ್ತೀಚೆಗೆ ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿ ಬಡ್ತಿಗೊಂಡ ಚಿತ್ರಾವತಿ ಚಿಗುರುಪಾದೆ ಅವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಅಂಗಸಂಸ್ಥೆಯ ಸದಸ್ಯರು ಪಾಲ್ಗೊಂಡಿದ್ದರು. ಆರಂಭದಲ್ಲಿ ಗುರುಗಳಾದ ಗಣೇಶ ನಾವಡರ ಮಾರ್ಗದರ್ಶನದಲ್ಲಿ ಗುರು ನರಸಿಂಹ ಅಷ್ಟೋತ್ತರ ನಾಮಾವಳಿ ಪಠಣ ನಡೆಯಿತು. ಟಿ ಡಿ ಸದಾಶಿವ ರಾವ್ ಸ್ವಾಗತಿಸಿ, ಅಂಗಸಂಸ್ಥೆಯ ಕಾರ್ಯದರ್ಶಿ ರಘು ರಾವ್ ಮೀಯಪದವು ವಂದಿಸಿದರು.

