ಹೈದರಾಬಾದ್: ''ಪ್ರಧಾನಿ ನರೇಂದ್ರ ಮೋದಿ ಅವರು ಫೆ.05 ರಂದು ಹೈದರಾಬಾದ್ ನಲ್ಲಿ ರಾಮಾನುಜಾಚಾರ್ಯರ 216 ಅಡಿ ಎತ್ತರದ ಸಮಾನತೆಯ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದ್ದು, ಈ ಪ್ರತಿಮೆ ಯುವಕರಿಗೆ ಪ್ರೇರಣೆಯಾಗಲಿದೆ, ಜ್ಞಾನ, ನಿರ್ಲಿಪ್ತತೆ ಮತ್ತು ಆದರ್ಶಗಳ ಪ್ರತೀಕವಾಗಿರಲಿದೆ ಎಂದು ಹೇಳಿದ್ದಾರೆ.
ಅಭಿವೃದ್ಧಿಗಾಗಿ ನಮ್ಮ ಪರಂಪರೆ, ಬೇರುಗಳನ್ನು ಮರೆಯಬಾರದು ಎಂಬುದು ಮುಖ್ಯ. ರಾಮಾನುಜಾಚಾರ್ಯರು ದಲಿತ ಸಮುದಾಯದ ಉದ್ಧಾರಕ್ಕಾಗಿ ಶ್ರಮಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ 11 ನೇ ಶತಮಾನದ ಸಂತರನ್ನು ಸ್ಮರಿಸಿದ್ದಾರೆ.
ರಾಮಾನುಜಾಚಾರ್ಯರ ಸಮಾನತೆಯ ಪರಿಕಲ್ಪನೆ ಅವರ ಕಾಲಘಟ್ಟದಲ್ಲಿ ಅತ್ಯಂತ ಪ್ರಗತಿಪರವಾಗಿತ್ತು. ಅವರು ಸಮಾಜದಲ್ಲಿದ್ದ ಅಸಮಾನತೆಯನ್ನು ತೊಡೆದುಹಾಕುವುದಕ್ಕಾಗಿ ಶ್ರಮಿಸಿದ್ದರು. ಸಮಾನತೆಯ ಬೃಹತ್ ಪ್ರತಿಮೆಯ ಮೂಲಕ ರಾಮಾನುಜಾಚಾರ್ಯರು ನಮಗೆ ಸಮಾನತೆಯ ಸಂದೇಶ ಸಾರುತ್ತಿದ್ದಾರೆ.
ರಾಮಾನುಜಾಚಾರ್ಯರು ಸಂಸ್ಕೃತದಲ್ಲಿ ಗ್ರಂಥರಚನೆಯ ಜೊತೆಗೆ ಭಕ್ತಿ ಮಾರ್ಗದಲ್ಲಿ ತಮಿಳು ಭಾಷೆಗೂ ಸಮಾನವಾದ ಪ್ರಾಮುಖ್ಯತೆ ನೀಡಿದ್ದರು. ನಮ್ಮ ಸಂಸ್ಕೃತಿ, ಪರಂಪರೆಗೆ ಅವರು ಅಮೂಲ್ಯ ಆಸ್ತಿಯಾಗಿದ್ದಾರೆ. ಅವರ ಬೋಧನೆಗಳಲ್ಲಿ ದ್ವೈತ ಹಾಗೂ ಅದ್ವೈತ ಸಮ್ಮಿಳಿತಗೊಂಡಿದ್ದವು, ವಿಶಿಷ್ಟಾದ್ವೈತ ಬೋಧನೆ ಸಮಕಾಲೀನದಲ್ಲಿ ನೈಜವಾಗಿದ್ದು ವ್ಯಕ್ತಿಗತವಾಗಿ ಹಾಗೂ ದೇಶದ ಪ್ರಜೆಗಳಾಗಿ ನಮ್ಮ ಜೀವನವನ್ನು ಸರಳಗೊಳಿಸುತ್ತದೆ ಎಂದು ಮೋದಿ ರಾಮಾನುಜಾಚಾರ್ಯರ ಕೊಡುಗೆಗಳನ್ನು ಸ್ಮರಿಸಿದ್ದು, ಶ್ರೇಷ್ಠ ನಾಯಕ ಹಾಗೂ ಸಮಾನತೆಯ ಪ್ರತಿಪಾದಕರಾಗಿದ್ದ ಬಿಆರ್ ಅಂಬೇಡ್ಕರ್ ಅವರು ರಾಮಾನುಜಾಚಾರ್ಯರ ಅನುಯಾಯಿಯಾಗಿದ್ದರು ಅಷ್ಟೇ ಅಲ್ಲದೇ ಎಲ್ಲರಿಗೂ ಸಮಾನವಾದ ಸಮಾಜದ ಪರಿಕಲ್ಪನೆಗೆ ಬದ್ಧರಾಗಿದ್ದರು ಎಂದು ಹೇಳಿದ್ದಾರೆ.