ನೋಯ್ಡಾ: ಮಾಜಿ ಐಪಿಎಸ್ ಅಧಿಕಾರಿ ರಾಮ್ ನಾರಾಯಣ್ ಸಿಂಗ್ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಲಾಕರ್ನಲ್ಲಿ ಕೋಟ್ಯಂತರ ರೂಪಾಯಿ ನಗದು ಮಾತ್ರವಲ್ಲದೆ ಚಿನ್ನ ಮತ್ತು ವಜ್ರದ ಆಭರಣಗಳು ಪತ್ತೆಯಾಗಿವೆ. ಇದಲ್ಲದೆ, ಲಾಕರ್ಗಳಲ್ಲಿ ಚಿನ್ನದ ಇಟ್ಟಿಗೆಗಳು ಮತ್ತು ಬಿಸ್ಕತ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಈ ಆಭರಣಗಳ ಮೌಲ್ಯ ಕೋಟ್ಯಂತರ ರೂಪಾಯಿ ಎಂದು ಅಂದಾಜಿಸಲಾಗಿದೆ. ಇವುಗಳಲ್ಲಿ ವಜ್ರ, ಮುತ್ತು, ಬೆಳ್ಳಿ ಮತ್ತು ಚಿನ್ನದ ಆಭರಣಗಳು ಸೇರಿವೆ.
ಆದಾಯ ತೆರಿಗೆ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ನೆಲಮಹಡಿಯಲ್ಲಿ ಪತ್ತೆಯಾಗಿರುವ 650 ಲಾಕರ್ ಗಳ ಪೈಕಿ 6 ಲಾಕರ್ ಗಳನ್ನು ಓಪನ್ ಮಾಡಲಾಗಿದೆ. ಈ ಪೈಕಿ ಒಂದು ಲಾಕರ್ ನಲ್ಲಿ ಚಿನ್ನದ ಇಟ್ಟಿಗೆಯನ್ನು ವಶಪಡಿಸಿಕೊಳ್ಳಲಾಗಿದೆ. ಆಶ್ಚರ್ಯವೆಂದರೆ ಈ ಆಭರಣಗಳು ಮತ್ತು ನಗದು ಹಣದ ಹಕ್ಕುದಾರರು ಇನ್ನೂ ಮುಂದೆ ಬಂದಿಲ್ಲ. ಚಿನ್ನದ ಇಟ್ಟಿಗೆಯ ಬೆಲೆ ಸುಮಾರು 45 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಉಳಿದ ಆಭರಣಗಳು 2.5 ಕೋಟಿ ರೂಪಾಯಿ ಎಂದು ಹೇಳಲಾಗಿದೆ.
ಈ ಮೊದಲು ಆದಾಯ ತೆರಿಗೆ ಇಲಾಖೆ ತಂಡ ದಾಳಿ ನಡೆಸಿದಾಗ ಲಾಕರ್ನಿಂದ ಸುಮಾರು 6 ಕೋಟಿ ರೂಪಾಯಿ ಪತ್ತೆಯಾಗಿತ್ತು. ಆದರೆ, ಈ ಹಣಕ್ಕೆ ಸಂಬಂಧಿಸಿದಂತೆ ಯಾರು ಹಕ್ಕುದಾರರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮುಂದೆ ಬಂದಿಲ್ಲ. ಹಾಗಾಗಿ ಈ ಹಣವನ್ನು ಕಪ್ಪುಹಣ ಎಂದು ಪರಿಗಣಿಸಿ ಜಪ್ತಿ ಪ್ರಕ್ರಿಯೆ ಆರಂಭಿಸಲಾಗಿದೆ. ಅಲ್ಲದೆ, ಚಿನ್ನಾಭರಣದ ಹಕ್ಕುದಾರರೂ ಯಾರು ಎಂದು ಈರವರೆಗೂ ಮುಂದೆ ಬಂದಿಲ್ಲ.
ಆದಾಯ ತೆರಿಗೆ ಇಲಾಖೆಯು ಚಿನ್ನದ ಆಭರಣಗಳು ಮತ್ತು ಚಿನ್ನದ ಬಿಸ್ಕೆಟ್ಗಳಂತಹ ಎಲ್ಲಾ ಆಭರಣಗಳನ್ನು ಸರ್ಕಾರದ ರಕ್ಷಣೆಯಲ್ಲಿ ಇರಿಸಿದೆ. ಮಾಜಿ ಐಪಿಎಸ್ ಮನೆಯಲ್ಲಿ 650 ಲಾಕರ್ಗಳಿದ್ದು, ಇದರಲ್ಲಿ ಸುಮಾರು 20 ಮಂದಿಯ ಲಾಕರ್ ಗಳ ಬಗ್ಗೆ ಅನುಮಾನ ಉಂಟಾಗಿದೆ. ಸದ್ಯ 6 ಲಾಕರ್ಗಳನ್ನು ಒಡೆದು ತನಿಖೆ ಮುಂದುವರಿಸಲಾಗಿದೆ.
ಚಿನ್ನ ಹಾಗೂ ವಜ್ರದ ಹಿಂದಿರುವ ಗುಟ್ಟೇನು?
ಮೂರು ದಿನಗಳ ಹಿಂದೆ ನೋಯ್ಡಾದ ಸೆಕ್ಟರ್ 50ರ ಬಂಗಲೆ ಸಂಖ್ಯೆ-ಎ6ರ ಮೇಲೆ ಆದಾಯ ತೆರಿಗೆ ಇಲಾಖೆ ತಂಡ ದಾಳಿ ನಡೆಸಿತ್ತು. ಈ ಬಂಗಲೆ ಯುಪಿ ಪೊಲೀಸ್ನ ಐಪಿಎಸ್ ಅಧಿಕಾರಿ, 1983 ರ ಬ್ಯಾಚ್ನ ನಿವೃತ್ತ ಐಪಿಎಸ್ ರಾಮ್ ನಾರಾಯಣ್ ಸಿಂಗ್ ಅವರಿಗೆ ಸೇರಿದೆ. ಈ ಬಂಗಲೆಯ ನೆಲಮಾಳಿಗೆಯಲ್ಲಿ ರಾಮ್ ನಾರಾಯಣ್ ಸಿಂಗ್ ಅವರ ಪತ್ನಿ ಮತ್ತು ಮಗ “ಮಾನ್ಸಮ್ ನೋಯ್ಡಾ ವಾಲ್ಟ್ಸ್ ಹೆಸರಿನಲ್ಲಿ ಪ್ರೈವೇಟ್ ಲಾಕರ್ಗಳನ್ನು ಗ್ರಾಹಕರಿಗೆ ಬಾಡಿಗೆಗೆ ನೀಡುತ್ತಿದ್ದರು.
ಕಳೆದ ಐದು ವರ್ಷಗಳಿಂದ ಈ ಸುರಕ್ಷತಾ ವಾಲೆಟ್ಸ್ ನಲ್ಲಿ ಲಾಕರ್ಗಳನ್ನು ಬಾಡಿಗೆಗೆ ನೀಡುವ ಕೆಲಸ ನಡೆಯುತ್ತಿತ್ತು. ತನಿಖೆಯ ವೇಳೆ ಈ ಲಾಕರ್ಗಳ ನಿರ್ವಹಣೆಯಲ್ಲೂ ಕೆಲವು ಅವ್ಯವಹಾರಗಳು ಕಂಡುಬಂದಿವೆ. ಇಲ್ಲಿ ಲಾಕರ್ ಸೇವೆಯನ್ನು ತೆಗೆದುಕೊಂಡ ಗ್ರಾಹಕರ ಕೆವೈಸಿ ಪತ್ತೆಯಾಗಿಲ್ಲ, ನಗದು, ಚಿನ್ನದ ಮಾಲು ಪತ್ತೆಯಾದ ಬಳಿಕ ಲಾಕರ್ ಗಳ ಮಾಲೀಕರಿಂದ ಮಾಹಿತಿ ಪಡೆಯಲಾಗುತ್ತಿದೆ.