ಮೋತಿಹಾರಿ : ಪಾರ್ಕ್ ಒಂದರಲ್ಲಿದ್ದ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಕಿಡಿಗೇಡಿಗಳು ಸಂಪೂರ್ಣವಾಗಿ ಧ್ವಂಸಗೊಳಿಸಿರುವ ಘಟನೆ ಬಿಹಾರದ ಮೋತಿಹಾರಿ ಎಂಬಲ್ಲಿ ಮಂಗಳವಾರ ನಡೆದಿದೆ.
ಪ್ರತಿಮೆ ಧ್ವಂಸಗೊಂಡ ಸ್ಥಳ ಮಹಾತ್ಮಾ ಗಾಂಧಿ ಅವರು ಬ್ರಿಟೀಷರ ವಿರುದ್ಧ ಚಂಪಾರಣ್ಯ ಸತ್ಯಾಗ್ರಹ ನಡೆಸಿದ್ದ ಸ್ಥಳದಿಂದ ಅನತಿ ದೂರದಲ್ಲಿದೆ.
ಘಟನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮೋತಿಹಾರಿ ಪ್ರದೇಶದ ಚರಕ ಪಾರ್ಕ್ನಲ್ಲಿದ್ದ ಗಾಂಧಿ ಪ್ರತಿಮೆಯನ್ನು ಕಿಡಗೇಡಿಗಳು ಧ್ವಂಸಗೊಳಿಸಿ ನೆಲದ ಮೇಲೆ ಎಸೆದು ಹೋಗಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಿಡಿಗೇಡಿಗಳ ಬಂಧನಕ್ಕೆ ಕ್ರಮ ವಹಿಸಲಾಗಿದೆ' ಎಂದು ಚಂಪಾರಣ್ಯ ಜಿಲ್ಲಾಧಿಕಾರಿ ಶೀರ್ಷತ್ ಕಪಿಲ್ ಅಶೋಕ್ ಅವರು ತಿಳಿಸಿದ್ದಾರೆ.
ಘಟನೆಯ ಹಿಂದಿನ ದಿನ ಕೆಲ ಬಲಪಂಥೀಯ ಸಂಘಟನೆಗಳು ಸ್ಥಳದಲ್ಲಿ ಧಾರ್ಮಿಕ ಘೋಷಣೆಗಳನ್ನು ಕೂಗಿದ್ದವು ಎನ್ನಲಾಗಿದೆ.
1917 ರಲ್ಲಿ ಮಹಾತ್ಮಾ ಗಾಂಧಿ ಮೊದಲ ಬಾರಿಗೆ ಸತ್ಯಾಗ್ರಹವನ್ನು ಬಿಹಾರ್ದ ಚಂಪಾರಣ್ಯದಲ್ಲಿ ನಡೆಸಿದ್ದರು.