ನವದೆಹಲಿ: ರಷ್ಯಾ-ಉಕ್ರೇನ್ ಸಂಘರ್ಷ ಮುಂದುವರೆದಿರುವಂತೆಯೇ ಇತ್ತ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 3ನೇ ಮಹತ್ವದ ಸಭೆ ನಡೆಯಿತು.
ಉಕ್ರೇನ್ ಮೇಲೆ ಸಮರ ಸಾರಿರುವ ರಷ್ಯಾ ದಾಳಿ ಮುಂದುವರೆಸಿದ್ದು, ಈ ನಡುವೆ ಯುದ್ಧ ಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರ ಎಲ್ಲ ಕೆಲಸಗಳನ್ನ ಮುಂದುವರೆಸಿದೆ. ಆಪರೇಷನ್ ಗಂಗಾ' ಅಡಿಯಲ್ಲಿ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವ ಪ್ರಗತಿ ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತೊಂದು ಮಹತ್ವದ ಸಭೆ ನಡೆಸಿದರು.
ಕಳೆದ 24 ಗಂಟೆಗಳಲ್ಲಿ ಮೋದಿ ನಡೆಸುತ್ತಿರುವ ಮೂರನೇ ಸಭೆ ಇದಾಗಿದ್ದು, ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ಮೋದಿ ವಹಿಸಿದ್ದರು. ಸಭೆ ವೇಳೆ ಆರಪರೇಷನ್ ಗಂಗಾದ ಪರಿಶೀಲನೆ ನಡೆಸಿದರು. ಬುಡಾಪೆಸ್ಟ್ (ಹಂಗೇರಿ) ಮತ್ತು ಬುಕಾರೆಸ್ಟ್ (ರೊಮೇನಿಯಾ) ನಿಂದ ಆರು ವಿಮಾನಗಳ ಮೂಲಕ ಇದುವರೆಗೆ ಸುಮಾರು 1,400 ಭಾರತೀಯರನ್ನ ಭಾರತಕ್ಕೆ ಕರೆ ತರಲಾಗಿದೆ. ಈ ವಿಚಾರವನ್ನು ಪ್ರಧಾನಿ ಮೋದಿ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಸಭೆಯಲ್ಲಿ ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರ ರಕ್ಷಣೆಗೆ ಪ್ರಧಾನ ಆದ್ಯತೆ ನೀಡಲಾಗಿದ್ದು, ಈಗ ಬಳಕೆ ಮಾಡಿರುವ ಮಾರ್ಗಗಳನ್ನು ಹೊರತುಪಡಿಸಿ, ಇನ್ನೂ ಬೇರೆ ಬೇರೆ ಮಾರ್ಗಗಳ ಮೂಲಕ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ರೊಮೇನಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿಯಿಂದ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಪ್ರಧಾನಿಗೆ ಮಾಹಿತಿ ನೀಡಿದರು.
ಈ ಕುರಿತು ಮಾಹಿತಿ ನೀಡಿದ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ ಅವರು, 'ಉಕ್ರೇನ್ನ ಗಡಿಯಲ್ಲಿನ ಮಾನವೀಯ ಪರಿಸ್ಥಿತಿಯನ್ನು ನಿಭಾಯಿಸಲು ಉಕ್ರೇನ್ಗೆ ಪರಿಹಾರ ಸಾಮಗ್ರಿಗಳ ಮೊದಲ ರವಾನೆಯನ್ನು ನಾಳೆ ರವಾನಿಸಲಾಗುವುದು ಎಂದು ಪ್ರಧಾನಿ ಹೇಳಿದರು. ಜಗತ್ತು ಒಂದೇ ಕುಟುಂಬ ಎಂಬ ಭಾರತದ ಧ್ಯೇಯವಾಕ್ಯದಿಂದ ಮಾರ್ಗದರ್ಶಿಸಲ್ಪಟ್ಟ ಪ್ರಧಾನಿ ಮೋದಿ, ಉಕ್ರೇನ್ನಲ್ಲಿ ಸಿಲುಕಿರುವ ನೆರೆಯ ದೇಶಗಳು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಜನರಿಗೆ ಭಾರತ ಸಹಾಯ ಮಾಡುತ್ತದೆ ಮತ್ತು ನೆರವು ಪಡೆಯಬಹುದು ಎಂದು ಹೇಳಿದರು ಎಂದು ಮಾಹಿತಿ ನೀಡಿದರು.
ಕೇಂದ್ರ ಸಚಿವರಾದ ಎಸ್. ಜೈಶಂಕರ್, ಹರ್ದೀಪ್ ಸಿಂಗ್ ಪುರಿ, ಜನರಲ್ (ನಿವೃತ್ತ) ವಿ.ಕೆ. ಸಿಂಗ್, ಕಿರಣ್ ರಿಜಿಜು, ಪಿಯೂಷ್ ಗೋಯಲ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಪ್ರಧಾನಮಂತ್ರಿ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ, ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಮತ್ತು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಮತ್ತು ಇತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.