ನವದೆಹಲಿ: ಆರೋಪಿಗಳು ಮತ್ತು ಅಪರಾಧಿಗಳಿಂದ ಪ್ರಕರಣಕ್ಕೆ ಅವಶ್ಯಕವಾದ ಭೌತಿಕ ಮತ್ತು ಜೈವಿಕ ಸ್ಯಾಂಪಲ್ ಸಂಗ್ರಹಿಸಲು ಪೊಲೀಸರಿಗೆ ಕಾನೂನಾತ್ಮಕ ಅವಕಾಶ ಕಲ್ಪಿಸಲು ಅಪರಾಧ ಪ್ರಕ್ರಿಯಾ ಸಂಹಿತೆಗೆ (ಸಿಆರ್ಪಿಸಿ) ತಿದ್ದುಪಡಿ ತರುವ ಸಿಆರ್ಪಿಸಿ (ಗುರುತಿಸುವಿಕೆ) ಮಸೂದೆಯನ್ನು ಸರ್ಕಾರ ಲೋಕಸಭೆಯಲ್ಲಿ ಸೋಮವಾರ ಮಂಡಿಸಿದೆ.
ಈ ಮಸೂದೆಯನ್ನು ಮಂಡಿಸಬೇಕೆ ಅಥವಾ ಬೇಡವೆ ಎಂಬುದು ಸದನದಲ್ಲಿ ಮತದ ಮೂಲಕ ನಿರ್ಧಾರ ಆಗಬೇಕು ಎಂದು ವಿರೋಧ ಪಕ್ಷಗಳ ಮುಖಂಡರಾದ ಅಧಿರ್ ರಂಜನ್ ಚೌಧರಿ, ಮನಿಷ್ ತಿವಾರಿ, ಸುಗತಾ ರಾಯ್, ಎನ್.ಕೆ.ಪ್ರೇಮಚಂದ್ರನ್ ಒತ್ತಾಯಿಸಿದರು. ಈ ಪ್ರಸ್ತಾವವನ್ನು ಮತಕ್ಕೆ ಹಾಕಿದಾಗ 120 ಸಂಸದರು ಮಸೂದೆ ಪರವಾಗಿ ಮತ್ತು 58 ಸದಸ್ಯರು ಮಸೂದೆ ಮಂಡನೆ ವಿರೋಧಿಸಿದರು. ನಂತರ ಮಸೂದೆ ಮಂಡಿಸಿದ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ, ವಿರೋಧ ಪಕ್ಷಗಳ ಆರೋಪ ಅರ್ತಾಕ. ಅಧುನಿಕ ತಂತ್ರಜ್ಞಾನದ ಮೂಲಕ ಸಾಕ್ಷ್ಯ ಸಂಗ್ರಹಿಸಲು ಇಂಥ ಕಾನೂನಾತ್ಮಕ ಅವಕಾಶಗಳು ತನಿಖಾ ಸಂಸ್ಥೆಗಳಿಗೆ ಅಗತ್ಯ. ಪ್ರಸ್ತುತ ಕಾನೂನಲ್ಲಿ ಆರೋಪಿ ಅಥವಾ ಅಪರಾಧಿಯ ಬೆರಳಚ್ಚು ಮತ್ತು ಪಾದದ ಅಚ್ಚನ್ನು ಪಡೆಯಲಷ್ಟೆ ಅವಕಾಶ ಇದೆ. ಆದರೆ, ಸಮಾಜದಲ್ಲಿ ಹೈಟೆಕ್ ಅಪರಾಧಗಳೂ ಘಟಿಸುತ್ತಿರುವ ಕಾರಣ ಈ ಸಾಕ್ಷ್ಯಗಳಷ್ಟೆ ಆರೋಪವನ್ನು ಸಾಬೀತು ಪಡಿಸಲು ಸಾಲದು ಎಂದು ಅಜಯ್ ಮಿಶ್ರಾ ಮಸೂದೆಯನ್ನು ಸಮರ್ಥಿಸಿಕೊಂಡರು.
ಯುಪಿಎ ಆಡಳಿತವಿದ್ದಾಗ ಬ್ಯಾಂಕ್ಗಳಿಗೆ ದೊಡ್ಡ ಮೊತ್ತದ ಸುಸ್ತಿದಾರರಿಂದ ಸಾಲ ವಸೂಲು ಆಗಿಲ್ಲ. ಸರ್ಕಾರದ ಈ ವೈಫಲ್ಯದ ಕಾರಣ ಸುಸ್ತಿದಾರರ ಸಾಲಗಳು ಅನುತ್ಪಾದಕ ಆಸ್ತಿಗಳಾದವು. ಮೋದಿ ನೇತೃತ್ವದ ಸರ್ಕಾರ ರಚನೆಯಾದ ಮೇಲೆ ವಸೂಲಾಗುವುದೇ ಇಲ್ಲ ಎಂದುಕೊಂಡಿದ್ದ ಸಾಲಗಳು ಮರುಪಾವತಿ ಆಗುತ್ತಿವೆ. ಸುಸ್ತಿದಾರರಿಂದ ಸಾಲ ವಸೂಲು ಮಾಡಲು ಕಠಿಣ ಕ್ರಮಗಳು ಜಾರಿಯಾಗಿವೆ.
| ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವೆ
ಗ್ಯಾಸ್, ತೈಲ ದರ ತಗ್ಗಿಸಲು ಒತ್ತಾಯ: ಇಂಧನ ಇಂಧನ ತೈಲಗಳು ಮತ್ತು ಅಡುಗೆ ಅನಿಲದ ಸಿಲಿಂಡರ್ ಬೆಲೆ ವಿಪರೀತ ಏರಿದ್ದು, ಜನರ ಬದುಕು ದುರ್ಬರ ಆಗಿದೆ. ಆದ್ದರಿಂದ ತೈಲ ದರ ಹೆಚ್ಚಳ ಹಿಂಪಡೆಯಬೇಕು. ತೈಲ ದರ ಏರಿಕೆಯ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತ ನಾಡಬೇಕು ಎಂದು ಆಗ್ರಹಿಸಿದರು. ರಷ್ಯಾ- ಯೂಕ್ರೇನ್ ಯುದ್ಧದ ಕಾರಣ ತೈಲ ಬೆಲೆ ಏರಿಕೆ ಕಾಣುತ್ತಿದೆ ಎಂಬ ಸರ್ಕಾರದ ವಾದವನ್ನು ನಿರಾಕರಿಸಿದರು.
ಕ್ರಿಪ್ಟೊ ಕರೆನ್ಸಿ ತೆರಿಗೆ ಏರಿಕೆಗೆ ಆಗ್ರಹ: ಕ್ರಿಪ್ಟೊ ಕರೆನ್ಸಿಗೆ ಶೇ. 30 ತೆರಿಗೆ ವಿಧಿಸುವ ಪ್ರಸ್ತಾವ ಬಜೆಟ್ನಲ್ಲಿ ಇದೆ. ಆದರೆ, ಈ ತೆರಿಗೆಯನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಬಿಜೆಪಿಯ ಸದಸ್ಯ ಸುಶೀಲ್ ಕುಮಾರ್ ಮೋದಿ ರಾಜ್ಯಸಭೆಯಲ್ಲಿ ಒತ್ತಾಯಿಸಿದರು. ಜಪಾನ್, ಜರ್ಮನಿ, ಫ್ರಾನ್ಸ್, ಆಸ್ಟ್ರಿಯಾಗಳಲ್ಲಿ ಕ್ರಿಪ್ಟೊ ಕರೆನ್ಸಿಗೆ ಶೇ. 55ರವರೆಗೂ ಇದೆ ಎಂದರು. ಜಿಎಸ್ಟಿ ತಪ್ಪಿಸಿದ್ದ ಕ್ರಿಪ್ಟೊ ಕರೆನ್ಸಿ ವಿನಿಮಯ ನಡೆಸುವ 11 ಸಂಸ್ಥೆಗಳಿಂದ ಬಡ್ಡಿ ಮತ್ತು ದಂಡ ಸೇರಿ 95.86 ಕೋಟಿ ರೂಪಾಯಿ ವಸೂಲು ಮಾಡಲಾಗಿದೆ ಎಂದು ಸರ್ಕಾರ ಸಂಸತ್ಗೆ ಮಾಹಿತಿ ನೀಡಿದೆ.
ಸಂಸತ್ಗೆ ಸರ್ಕಾರದ ಉತ್ತರ
- ಸಾರ್ವಜನಿಕ ವಲಯದ ಘಟಕಗಳನ್ನು ಮುಚ್ಚುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರ ತಿಳಿಸಿದೆ.
- ದೇಶದ ಶೇ. 82ರಷ್ಟು ಭೂಪ್ರದೇಶ ಮತ್ತು ಶೇ. 98ರಷ್ಟು ಜನಸಂಖ್ಯೆಯು ಕೊಳಾಯಿ ಮೂಲಕ ಅಡುಗೆ ಅನಿಲ ಪೂರೈಕೆಯ ವ್ಯಾಪ್ತಿಗೆ ಬಂದಿದೆ.
- ಯೂಕ್ರೇನ್ ಮರಳಿದ ವಿದ್ಯಾರ್ಥಿಗಳ ಶಿಕ್ಷಣ ಅರ್ಧಕ್ಕೆ ಮೊಟಕುಗೊಳ್ಳದಂತೆ ಸರ್ಕಾರ ಖಾತ್ರಿ ನೀಡಬೇಕು. ವಿದ್ಯಾರ್ಥಿಗಳು ವ್ಯಾಸಂಗ ಪೂರ್ಣಗೊಳಿಸಲು ಅವಕಾಶ ನೀಡಬೇಕೆಂದು ವಿರೋಧ ಪಕ್ಷಗಳ ಆಗ್ರಹ.
- ಉತ್ತರ ಪ್ರದೇಶದ ಎಸ್ಸಿ/ಎಸ್ಟಿ ಪಟ್ಟಿ ಪರಿಷ್ಕರಿಸುವ ತಿದ್ದುಪಡಿ ಮಂಡನೆ
- ರಷ್ಯಾದಿಂದ ರಿಯಾಯಿತಿ ದರದಲ್ಲಿ ಪಡೆಯ ಲಾಗುತ್ತಿರುವ ತೈಲವನ್ನು ರೂಪಾಯಿ ಲೆಕ್ಕದಲ್ಲಿ ಖರೀದಿಸುತ್ತಿಲ್ಲ ಮತ್ತು ಈ ವಿಧಾನ ದಲ್ಲಿ ಖರೀದಿಸುವ ಉದ್ದೇಶವೂ ಇಲ್ಲ.
- 2021ರ ಡಿಸೆಂಬರ್ವರೆಗೆ 5,200 ಕಂಪನಿಗಳ 5 ಕೋಟಿ ರೂಪಾಯಿ ಅನುತ್ಪಾದಕ ಆಸ್ತಿಯನ್ನು ಘೋಷಣೆ ಆಗಿದೆ.
- ಕಳೆದ ಐದು ವರ್ಷಗಳಿಂದ ಕೃಷಿ ಸಾಲ ಮನ್ನಾ ಮಾಡುವ ಯಾಉದೇ ಯೋಜನೆಯನ್ನು ಸರ್ಕಾರ ಪ್ರಕಟಿಸಿಲ್ಲ.
- 2018ರಿಂದ 2021ರವೆರೆಗೆ ರೈಲು ಅಪಘಾತದಿಂದ 45 ಆನೆಗಳು ಸತ್ತಿವೆ. ಇದರಲ್ಲಿ ಕರ್ನಾಟಕದ ಎರಡು ಪ್ರಕರಣಗಳೂ ಸೇರಿವೆ.
- 2014ರಿಂದ ಈವರೆಗೆ 3,343 ಕೋಟಿ ರೂ. ವಿದೇಶಿ ನೇರ ಹೂಡಿಕೆ ಹರಿದುಬಂದಿದೆ.
- ದೇಶದ 15 ರಾಜ್ಯಗಳ 1,114 ಪ್ರದೇಶಗಳಲ್ಲಿ ಅಂತರ್ಜಲ ಕಲುಷಿತವಾಗಿದೆ.