ರಾಯಗಢ: ಸರ್ಕಾರಿ ಭೂ ಕಬಳಿಕೆ ಪ್ರಕರಣದಲ್ಲಿ ಸಾಕ್ಷಾತ್ ಶಿವ ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆ ಎದುರಿಸಿದ ವಿರಾಳಾತಿ ವಿರಳ ಪ್ರಕರಣ ಛತ್ತೀಸ್ಗಢದ ರಾಯಗಢ ಜಿಲ್ಲೆಯ ನ್ಯಾಯಾಲಯದಲ್ಲಿ ನಡೆದಿದೆ.
ಇದೇನಪ್ಪಾ ಇದು ಸಾಧ್ಯನಾ? ಈಶ್ವರ ನ್ಯಾಯಾಲಯಕ್ಕೆ ಬರುವುದೆಂದರೆ ಏನು?
ಅಷ್ಟಕ್ಕೂ ನಡೆದಿದ್ದೇನೆಂದರೆ, ರಾಯಗಢದಲ್ಲಿ ಶಿವನ ದೇವಾಲಯವಿದೆ. ಇದರ ವಿರುದ್ಧ ರಾಯಗಢದ 25ನೇ ವಾರ್ಡಿನ ಸುಧಾ ರಾಜ್ವಾಡೆ ಎಂಬುವರು ಬಿಲಾಸ್ಪುರ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ, ಅಕ್ರಮವಾಗಿ ಆಕ್ರಮಿಸಿಕೊಳ್ಳಲಾದ ಸರ್ಕಾರಿ ಭೂಮಿಯಲ್ಲಿ ಶಿವನ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿದ್ದರು. ಶಿವನ ದೇವಸ್ಥಾನ ಸೇರಿದಂತೆ ಒಟ್ಟು 16 ಸರ್ಕಾರ ಭೂಮಿಗಳನ್ನು ಆಕ್ರಮಿಸಿಕೊಳ್ಳಲಾಗಿದೆ ಎಂದು ಸುಧಾ ದೂರಿದ್ದರು. ವಿಚಾರಣೆ ನಡೆಸಿದ ಬಿಲಾಸ್ಪುರ್ ಹೈಕೋರ್ಟ್ ಸಂಪೂರ್ಣ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ತಕ್ಷಣವೇ ಸ್ಥಳೀಯ ತಾಲೂಕು ಕಚೇರಿ ಘಟನಾ ಸ್ಥಳಕ್ಕೆ ತೆರಳಿವ ವಿಶೇಷ ತನಿಖಾ ತಂಡವನ್ನು ರಚಿಸಿ ಮೂರು ದಿನ ತನಿಖೆ ನಡೆಸಿತ್ತು.
ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದ ಆಧಾರದ ಮೇಲೆ ಕ್ರಮ ಕೈಗೊಂಡ ಅಧಿಕಾರಿಗಳು 10 ಮಂದಿಗೆ ನೋಟಿಸ್ ಹೊರಡಿಸಿದ್ದರು. ನೋಟಿಸ್ ಸ್ವೀಕರಿಸಿದ ಆರನೇ ವ್ಯಕ್ತಿ ಸಾಕ್ಷಾತ್ ಶಿವ ಎಂಬುದೇ ಇಲ್ಲಿನ ವಿಶೇಷ. ತಹಸಿಲ್ದಾರ್ ವಿಕ್ರಾಂತ್ ಸಿಂಗ್ ಠಾಕೂರ್ ಅವರು ನೋಟಿಸ್ ನೀಡಿ ಹೈಕೋರ್ಟ್ ನಿರ್ದೇಶನದ ಮೇರೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.
ಶಿವನ ಹೆಸರು ನೋಟಿಸ್ನಲ್ಲಿ ಬರಲು ಕಾರಣವೇನೆಂದರೆ, ಕೋರ್ಟ್ಗೆ ಅರ್ಜಿ ಸಲ್ಲಿಸುವಾಗ ಸುಧಾ ಅವರು ಶಿವನ ದೇವಸ್ಥಾನವನ್ನು ತಮ್ಮ ಅರ್ಜಿಯಲ್ಲಿ ದಾಖಲಿಸಿದ್ದರು. ಶಿವನ ದೇವಸ್ಥಾನದ ವಿರುದ್ಧ ಪ್ರಕರಣ ದಾಖಲಿಸಿದರೆ, ಟ್ರಸ್ಟಿ ಅಥವಾ ದೇವಸ್ಥಾನದ ಅರ್ಚಕರಿಗೆ ಯಾವುದೇ ನೋಟಿಸ್ ನೀಡದೆ ನೇರವಾಗಿ ಶಿವನ ಹೆಸರಿಗೆ ಕಳುಹಿಸಬೇಕಾಗಿತ್ತು. ಅದರಂತೆ ರಾಯಗಢ ಜಿಲ್ಲೆಯ ಕಂದಾಯ ಅಧಿಕಾರಿಗಳು ಇದೇ ಮಾರ್ಚ್ನಲ್ಲಿ ಶಿವನಿಗೆ ನ್ಯಾಯಾಲಯದ ನೋಟಿಸ್ ನೀಡಿದ್ದರು. ಮಾರ್ಚ್ 25ರ ಒಳಗೆ ವಿಚಾರಣೆಗೆ ಹಾಜರಾಗದಿದ್ದರೆ, 10 ಸಾವಿರ ರೂ. ದಂಡ ವಿಧಿಸಿ, ಸ್ಥಳದಿಂದ ಖಾಲಿ ಮಾಡಿಸುವುದಾಗಿ ಎಚ್ಚರಿಕೆ ನೀಡಿದ್ದರು.
ನೋಟಿಸ್ನಂತೆ ಮಹಾಶಿವ ನಿನ್ನೆ ರಾಯಗಢ ತಾಲೂಕು ಕೋರ್ಟ್ಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಶಿವನ ಜತೆ ನೋಟಿಸ್ ಸ್ವೀಕರಿಸಿದ ಇತರೆ 9 ಮಂದಿ ವಿಚಾರಣೆಗೆ ಹಾಜರಾಗಲು ಬರುವಾಗ ತಮ್ಮ ಜತೆಯಲ್ಲಿ ಶಿವಲಿಂಗವನ್ನು ತೆಗೆದುಕೊಂಡು ಬಂದು ವಿಚಾರಣೆಯನ್ನು ಎದುರಿಸಿದ್ದಾರೆ. ಶಿವನ ಪ್ರತಿರೂಪ ಶಿವಲಿಂಗ ನ್ಯಾಯಾಲಯದ ವಿಚಾರಣೆ ಎದುರಿಸಿದ್ದು, ಇದೊಂದು ರೀತಿಯಲ್ಲಿ ವಿನೂತನ ಪ್ರಕರಣವಾಗಿದೆ.