ಹೊಸದುರ್ಗ : ಪೊಲೀಸರ ಕೈಗೆ ಸಿಗಬಾರದು ಎಂದು ಕಳ್ಳರು ಏನೆಲ್ಲಾ ಪ್ಲ್ಯಾನ್ ಮಾಡಿ ಚಾಪೆ ಕೆಳಗೆ ನುಸುಳಿದರೆ ಪೊಲೀಸರು ರಂಗೋಲಿ ಕೆಳಗೆ ನುಸುಳುವುದು ಸರ್ವೆ ಸಾಮಾನ್ಯ. ಅಂಥದ್ದೇ ಒಂದು ಕುತೂಹಲಕಾರಿ ಘಟನೆ ಕೇರಳದಲ್ಲಿ ನಡೆದಿದ್ದು, ಪೊಲೀಸರು ವಾಟ್ಸ್ಆಯಪ್ ಗ್ರೂಪ್ ರಚಿಸಿಕೊಂಡು ಕಳ್ಳನನ್ನು ಹಿಡಿಯಲು ಮುಂದಾಗಿದ್ದಾರೆ.
ಪೊಲೀಸ್ ಇಲಾಖೆಯ ಇತಿಹಾಸದಲ್ಲಿಯೇ ಇದೊಂದು ರೋಚಕ ಹಾಗೂ ಕುತೂಹಲಕಾರಿ ಘಟನೆಯಾಗಿದ್ದು, ಪೊಲೀಸರ ಮಾಸ್ಟರ್ಪ್ಲ್ಯಾನ್ಗೆ ಎಲ್ಲೆಡೆಯಿಂದ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ. ಕಾಸರಗೋಡಿನ ಹೊಸದುರ್ಗ ಪೊಲೀಸರು ಇಂಥದ್ದೊಂದು ಕ್ರಮ ಕೈಗೊಂಡವರು.
ಕಳ್ಳತನ ಮಾಡಿ ತಲೆ ಮರೆಸಿಕೊಂಡಿರುವ ಆರೋಪಿ ಅಶೋಕನ್ ಎಂಬಾತನಿಗೆ ಬಲೆ ಬೀಸಲು ಪೊಲೀಸರು ಒಂದು ವಾಟ್ಸ್ಆಯಪ್ ಗ್ರೂಪ್ ರಚಿಸಿಕೊಂಡಿದ್ದರು. ಈತ ಗೃಹಿಣಿಯೊಬ್ಬರ ಮೇಲೆ ಹಲ್ಲೆ ನಡೆಸಿ, ಚಿನ್ನಾಭರಣ ದೋಚಿ ಪರಾರಿಯಾಗಿದ್ದನು. ಇದಾಗಲೇ ಈತ ಹಲವಾರು ಕಡೆ ದರೋಡೆ ಮಾಡಿದರೂ ಸುಳಿವು ನೀಡದೇ ಎಸ್ಕೇಪ್ ಆಗುತ್ತಿದ್ದಾನೆ. ಈ ಪ್ರಕರಣದಲ್ಲಿ ಅವನಿಗಾಗಿ ಎಲ್ಲೆಡೆ ಶೋಧ ಕಾರ್ಯ ನಡೆದರೂ ಸಿಕ್ಕಿಬಿದ್ದಿರಲಿಲ್ಲ. ಕೊನೆಗೆ ಆತನ ಹೆಸರಿನಲ್ಲಿಯೇ ವಾಟ್ಸ್ಆಯಪ್ ಗ್ರೂಪ್ ರಚಿಸುವ ಆಲೋಚನೆ ಮಾಡಿದ್ದಾರೆ.
'ಕಳ್ಳ ಅಶೋಕನ್' ಎಂಬ ಹೆಸರಿನಲ್ಲಿ ವಾಟ್ಸ್ಆಯಪ್ ಗ್ರೂಪ್ ರಚನೆ ಮಾಡಿದ್ದು, ಅದರಲ್ಲಿ ಆತ ಪದೇ ಪದೇ ಕಳ್ಳತನ ಮಾಡುತ್ತಿದ್ದ ಮಡಿಕ್ಕಾಯಿ ಗ್ರಾಮದ ಸದಸ್ಯರನ್ನ ಸೇರಿಸಿದ್ದಾರೆ. 251 ಸದಸ್ಯರು ಈ ಗ್ರೂಪ್ನಲ್ಲಿದ್ದಾರೆ. ಇದರಲ್ಲಿ ಅಶೋಕನ್ನ ಚಿತ್ರ ಹಾಗೂ ಸಂಪೂರ್ಣ ಮಾಹಿತಿಯನ್ನು ಪೊಲೀಸರು ಹಂಚಿಕೊಂಡಿದ್ದಾರೆ. ಆತ ಎಲ್ಲೇ ಕಂಡರೂ ಆ ಬಗ್ಗೆ ಸುಳಿವು ನೀಡುವಂತೆ ಪೊಲೀಸರು ಹೇಳಿದ್ದರು. ಮೊದಲಿಗೆ ಆತನ ಆಪ್ತ ಸಹಾಯಕ ಮಂಜುನಾಥನ್ ಜನರ ಕಣ್ಣಿಗೆ ಬಿದ್ದಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 400 ಎಕರೆ ಸರ್ಕಾರಿ ಮೀಸಲು ಅರಣ್ಯ ಪ್ರದೇಶದಲ್ಲಿ ಆತ ಬಚ್ಚಿಟ್ಟುಕೊಂಡಿದ್ದಾನೆಂದು ತನಿಖೆ ವೇಳೆ ಪೊಲೀಸರಿಗೆ ತಿಳಿದುಬಂದಿದ್ದು, ಶೀಘ್ರದಲ್ಲಿ ಅಶೋಕನ್ ಹಾಗೂ ಆತನ ಸಹಚರರನ್ನು ಬಂಧಿಸುವುದಾಗಿ ಹೇಳಿದ್ದಾರೆ.