ಕೈವ್: ಮಾರಿಯುಪೋಲ್ಗೆ ಶರಣಾಗುವಂತೆ ಮಾಸ್ಕೋದ ಎಚ್ಚರಿಕೆಯ ನಡುವೆ ಉಕ್ರೇನ್ ರಷ್ಯಾಕ್ಕೆ ತಲೆಬಾಗಲು ನಿರಾಕರಿಸಿದೆ. ಇದರ ಬಳಿಕ ಎರಡೂ ರಾಷ್ಟ್ರಗಳ ಮಧ್ಯೆ ಮಾತುಕತೆ ನಡೆಯದಿದ್ದರೆ ಅದು ಮೂರನೇ ಮಹಾಯುದ್ಧಕ್ಕೆ ಆಹ್ವಾನ ನೀಡಿದಂತೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತೊಮ್ಮೆ ಜಗತ್ತಿಗೆ ನೆನಪಿಸಿದ್ದಾರೆ.
ಮಾಸ್ಕೋ ಸಮಯ ಸೋಮವಾರ 5 ಗಂಟೆಗೆ ಮಾರಿಯುಪೋಲ್ ನಗರವನ್ನು ತೊರೆಯಬೇಕೆಂಬ ರಷ್ಯಾದ ಬೇಡಿಕೆಯನ್ನು ಉಕ್ರೇನ್ ಉಪ ಪ್ರಧಾನಿ ತಿರಸ್ಕರಿಸಿದ್ದಾರೆ. ಯಾವುದೇ ಶರಣಾಗತಿಯ ಪ್ರಶ್ನೆಯೇ ಇಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ. ರಷ್ಯಾದ ರಕ್ಷಣಾ ಸಚಿವಾಲಯವು ಮಾರಿಯುಪೋಲ್ ಶರಣಾಗತಿಗೆ ಬದಲಾಗಿ ಮಾನವೀಯ ಕಾರಿಡಾರ್ ತೆರೆಯಲು ಮುಂದಾಗಿದೆ ಎಂದು ಬಿಬಿಸಿ ಹೇಳಿದೆ.
ಇದಕ್ಕೂ ಮೊದಲು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ರಷ್ಯಾ ಮಾರಿಯುಪೋಲ್ನಲ್ಲಿ ಯುದ್ಧ ಅಪರಾಧಗಳನ್ನು ಎಸಗಿದ್ದಾರೆ ಎಂದು ಆರೋಪಿಸಿದರು. ಉಕ್ರೇನ್ ಮೇಲಿನ ಆಕ್ರಮಣವನ್ನು ಅಂತ್ಯಗೊಳಿಸಲು ಮಾತುಕತೆ ನಡೆಸಲು ರಷ್ಯಾ ವಿಫಲವಾದರೆ ‘ಮೂರನೆಯ ಮಹಾಯುದ್ಧ’ಕ್ಕೆ ನೀಡಿದ ಆಹ್ವಾನ ಎಂಬ ಅರ್ಥ ನೀಡುತ್ತದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ಭಾನುವಾರ ಸಿಎನ್ಎನ್ನೊಂದಿಗೆ ಮಾತನಾಡಿದ ಝೆಲೆನ್ಸ್ಕಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ನೇರ ಮಾತುಕತೆಗೆ ಮುಕ್ತರಾಗಿದ್ದೇವೆ. ಹೋರಾಟವನ್ನು ಕೊನೆಗೊಳಿಸಲು ಮಾತುಕತೆಯೊಂದೇ ದಾರಿ. ಮಾತುಕತೆಯನ್ನು ಸಾಧ್ಯವಾಗಿಸಲು ನಾವು ಯಾವುದೇ ವಿಧಾನವನ್ನಾದರೂ ಬಳಸಬೇಕು. ಆದಾಗ್ಯೂ ರಷ್ಯಾ ವಶಕ್ಕೆ ಪಡೆದಿರುವ ಹಾಗೂ ಸ್ವತಂತ್ರವೆಂದು ಗುರುತಿಸಿರುವ ಪ್ರದೇಶಗಳಿಗೆ ಸಂಬಂಧಿಸಿದ ಯಾವುದೇ ಒಪ್ಪಂದವನ್ನು ತಿರಸ್ಕರಿಸುವುದಾಗಿ ಝೆಲೆನ್ಸ್ಕಿ ತಿಳಿಸಿದ್ದಾರೆ.
ತಮ್ಮ ದೇಶವು ನ್ಯಾಟೋ ಸದಸ್ಯರಾಗಿದ್ದಲ್ಲಿ ಯುದ್ಧವು ಪ್ರಾರಂಭವಾಗುತ್ತಿರಲಿಲ್ಲ ಎಂದು ಇದೇ ವೇಳೆ ಹೇಳಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ನ್ಯಾಟೋ ಸದಸ್ಯರು ಮೈತ್ರಿಯಲ್ಲಿ ನಮ್ಮನ್ನು ಸೇರಲು ಸಿದ್ಧರಿದ್ದರೆ, ತಕ್ಷಣವೇ ಇದನ್ನು ಸಾಧ್ಯವಾಗಿಸಿ. ಏಕೆಂದರೆ ಜನರು ಪ್ರತಿದಿನ ಸಾಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಮಾರಿಯುಪೋಲ್ನ ಮೇಯರ್ನ ಸಲಹೆಗಾರರಾದ ಪಯೋಟರ್ ಆಂಡ್ರಿಶೆಂಕೊ, ಮಾಸ್ಕೋದ ಮಾನವೀಯ ಭರವಸೆಗಳನ್ನು ನಂಬಲು ಸಾಧ್ಯವಿಲ್ಲ. ನಮ್ಮ ನಗರವನ್ನು ರಕ್ಷಿಸಿಕೊಳ್ಳುವುದನ್ನು ನಾವು ನಿಲ್ಲಿಸುವುದಿಲ್ಲ ಎಂದು ತಿಳಿಸಿದ್ದಾರೆ.