ತಿರುಮಲ: ಆಂಧ್ರಪ್ರದೇಶದ ಖ್ಯಾತ ಧಾರ್ಮಿಕ ಯಾತ್ರಾತಾಣ ತಿರುಪತಿಯ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ ಮೂವರು ಭಕ್ತರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ತಿರುಮಲ ವೆಂಕಟೇಶ್ವರಸ್ವಾಮಿ ದರ್ಶನಕ್ಕಾಗಿ ವಿತರಣೆ ಮಾಡುವ ಸರ್ವದರ್ಶನ ಟಿಕೆಟ್ ಪಡೆಯಲು ದೇಗುಲದ ಟಿಕೆಟ್ ಕೌಂಟರ್ನಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಜಮಾಯಿಸಿದ್ದ ಸಂದರ್ಭದಲ್ಲಿ ಏಕಾಏಕಿ ಸಂಭವಿಸಿದ ನೂಕು ನುಗ್ಗಲಿನಲ್ಲಿ ಕನಿಷ್ಟ ಮೂವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಕೋವಿಡ್ ಸಾಂಕ್ರಾಮಿಕದ ಬಳಿಕ ಟಿಟಿಡಿ ಸರ್ವದರ್ಶನಕ್ಕೆ ಟಿಕೆಟ್ ನೀಡಿಕೆ ಆರಂಭಿಸಿದಾಗಿನಿಂದಲೂ ಸರ್ವದರ್ಶನ ಟಿಕೆಟ್ ಗಾಗಿ ಭಾರಿ ಬೇಡಿಕೆ ಎದುರಾಗಿತ್ತು. ಈ ಹಿಂದೆ ಆನ್ ಲೈನ್ ನಲ್ಲಿದ್ದ ಟಿಕೆಟ್ ನೀಡಿಕೆಯನ್ನು ಟಿಟಿಡಿ ಕೋವಿಡ್ ತಗ್ಗಿದ ಬಳಿಕ ಆಫ್ ಲೈನ್ ಅಂದರೆ ಕೌಂಟರ್ ಗಳಲ್ಲಿ ಟಿಕೆಟ್ ನೀಡಿಕೆ ಪ್ರಕ್ರಿಯೆ ಆರಂಭಿಸಿತ್ತು. ಆಗಿನಿಂದಲೂ ಸರ್ವದರ್ಶನ ಟಿಕೆಟ್ ಗಾಗಿ ಸಾವಿರಾರು ಜನರು ಟಿಕೆಟ್ ಕೌಂಟರ್ ಗಳ ಬಳಿ ಜಮಾಸುತ್ತಿದ್ದಾರೆ.
ಇಂದೂ ಸಹ ಟಿಕೆಟ್ ಕೌಂಟರ್ ಬಳಿ ಕನಿಷ್ಛ ಸುಮಾರು 60 ಸಾವಿರ ಜನ ಸರ್ವದರ್ಶನ ಟಿಕೆಟ್ ಕೌಂಟರ್ ಬಳಿ ಜಮಾಯಿಸಿದ್ದರು. ಕೌಂಟರ್ ತೆರೆಯುತ್ತಿದ್ದಂತೆಯೇ ಏಕಾಏಕಿ ನೂಕುನುಗ್ಗಲು ಸಂಭವಿಸಿದೆ. ಈ ವೇಳೆ ಭಕ್ತರಿಗೆ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಘಟನೆಗೆ ಟಿಟಿಡಿ ಎಡವಟ್ಟು ಕಾರಣ?
ಕಾಲ್ತುಳಿತ ಘಟನೆಗೆ ಟಿಟಿಡಿಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು, ಕಳೆದ ಎರಡು ದಿನಗಳಿಂದ ಟಿಟಿಡಿ ಸರ್ವದರ್ಶನ ಟಿಕೆಟ್ ನೀಡಿಕೆಯನ್ನು ಸ್ಥಗಿತಗೊಳಿಸಿತ್ತು. ಹೀಗಾಗಿ ಟಿಕೆಟ್ ಗಾಗಿ ಸೇರಿದ್ದ ಜನರ ಪ್ರಮಾಣ ಹೆಚ್ಚಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತಿರುಮಲದಲ್ಲಿ ತಂಗಿದ್ದರು. ಏಕಾಏಕಿ ಇಂದು ಟಿಕೆಟ್ ನೀಡಿಕೆ ಪ್ರಕ್ರಿಯೆ ಆರಂಭಿಸಿದ್ದರಿಂದ ಟಿಕೆಟ್ ಗಾಗಿ ಜನ ನುಗ್ಗಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ. ಇಂದು ಬೆಳಗ್ಗೆ ಟಿಕೆಟ್ ಕೌಂಟರ್ ಹಳಿ ಹಾಕಲಾಗಿದ್ದ ಕಬ್ಬಿಣದ ಬೇಲಿ ಹಾರಿ ಭಕ್ತರು ಕೌಂಟರ್ ಪ್ರವೇಶಿಸಲು ಯತ್ನಿಸಿದ್ದಾರೆ. ಇದರಿಂದ ತಿರುಮಲ ದೇವಸ್ಥಾನದಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ತಿಳಿದು ಬಂದಿದೆ. ಟಿಟಿಡಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಲ್ತುಳಿತ ಸಂಭವಿಸಿದೆ ಎಂದು ಭಕ್ತರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಶ್ರೀ ವೆಂಕಟೇಶ್ವರ ಸ್ವಾಮಿ ವಾರಿ ದೇವಸ್ಥಾನ, ತಿರುಪತಿ ಬಾಲಾಜಿ ದೇವಸ್ಥಾನ ಎಂದು ಪ್ರಸಿದ್ಧವಾಗಿದ್ದು ಇದು ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ತಿರುಪತಿಯಲ್ಲಿರುವ ತಿರುಮಲ ಬೆಟ್ಟದ ಪಟ್ಟಣದಲ್ಲಿರುವ ದೇವಾಲಯವಾಗಿದೆ. ತಿರುಮಲ ಬೆಟ್ಟಗಳು ಶೇಷಾಚಲಂ ಬೆಟ್ಟಗಳ ಶ್ರೇಣಿಯ ಭಾಗವಾಗಿದೆ.
ಟಿಕೆಟ್ ಇಲ್ಲದೇ ದರ್ಶನಕ್ಕೆ ಅವಕಾಶ ಕೊಟ್ಟ ಟಿಟಿಡಿ!!?
ತಿರುಮಲದಲ್ಲಿ ಸರ್ವದರ್ಶನ ಟಿಕೆಟ್ ಗಾಗಿ ಸೇರಿರುವ ಭಕ್ತರ ಸಂಖ್ಯೆ ಹೆಚ್ಚಾಗಿರುವ ಕಾರಣ ಟಿಟಿಡಿ ವಿಐಪಿ ದರ್ಶನಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದೆ. ಮೂಲಗಳ ಪ್ರಕಾರ ಮುಂದಿನ ಭಾನುವಾರದ ವರೆಗೂ ವಿಐಪಿ ದರ್ಶನ ಸ್ಥಗಿತವಾಗಿದೆ ಎನ್ನಲಾಗಿದೆ. ಅಲ್ಲದೆ ಟಿಕೆಟ್ ಇಲ್ಲದೇ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಿದೆ ಎನ್ನಲಾಗಿದೆ. ಈ ಕುರಿತಂತೆ ಪ್ರಕಟಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆಯಾದರೂ ಈ ಬಗ್ಗೆ ಟಿಟಿಡಿ ತನ್ನ ಅಧಿಕೃತ ಖಾತೆಯಲ್ಲಿ ಸ್ಪಷ್ಟನೆ ನೀಡಿಲ್ಲ.