ಅಹಮದಾಬಾದ್: ಕೊರೋನಾವೈರಸ್ ಹೋಗಿಲ್ಲ. ರೂಪ ಬದಲಾಯಿಸುತ್ತಾ ಮತ್ತೆ ಮತ್ತೆ ಮರುಕಳಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟವನ್ನು ಕೈಬಿಡಬೇಡಿ ಎಂದು ಎಚ್ಚರಿಸಿದ್ದಾರೆ.
'ಬಹುರುಪಿಯಾ' (ರೂಪವನ್ನು ಬದಲಾಯಿಸುವ) ಅಔಗಿIಆ-19 ಯಾವಾಗ ಪುನರುಜ್ಜೀವನಗೊಳ್ಳುತ್ತದೆ ಎಂದು ಯಾರಿಗೂ ತಿಳಿದಿಲ್ಲ, ಅದರ ಹರಡುವಿಕೆಯನ್ನು ನಿಯಂತ್ರಿಸಲು ಸುಮಾರು 185 ಕೋಟಿ ಡೋಸ್ ಲಸಿಕೆಗಳನ್ನು ನೀಡುವುದು ಸಾರ್ವಜನಿಕ ಬೆಂಬಲದಿಂದಾಗಿ ಸಾಧ್ಯವಾಯಿತು ಎಂದು ಮೋದಿ ಹೇಳಿದರು.
ಗುಜರಾತಿನ ಜುನಾಗಢ್ ಜಿಲ್ಲೆಯಲ್ಲಿ ಮಾ ಉಮಿಯಾ ಧಾಮ್ ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಿದ ಮೋದಿ, ರಾಸಾಯನಿಕ ಗೊಬ್ಬರಗಳ ಹಾವಳಿಯಿಂದ ಭೂಮಿ ತಾಯಿಯನ್ನು ಉಳಿಸುವ ಉದ್ದೇಶದಿಂದ ನೈಸರ್ಗಿಕ ಕೃಷಿಯತ್ತ ಮುಖಮಾಡುವಂತೆ ಮಾ ಉಮಿಯಾ ಭಕ್ತರನ್ನು ಒತ್ತಾಯಿಸಿದರು.
ಕೊರೋನಾ ಒಂದು ದೊಡ್ಡ ಬಿಕ್ಕಟ್ಟು, ಮತ್ತು ಬಿಕ್ಕಟ್ಟು ಮುಗಿದಿದೆ ಎಂದು ನಾನು ಹೇಳುತ್ತಿಲ್ಲ. ಇದು ವಿರಾಮ ತೆಗೆದುಕೊಂಡಿರಬಹುದು. ಆದರೆ ಅದು ಯಾವಾಗ ಮರುಕಳಿಸುತ್ತದೆ ಎಂದು ನಮಗೆ ತಿಳಿದಿಲ್ಲ. ಇದು 'ಬಹುರೂಪಿ' ಸಾಂಕ್ರಾಮಿಕವಾಗಿದೆ. ಇದನ್ನು ನಿಲ್ಲಿಸಲು, ಸುಮಾರು 185 ಕೋಟಿ ಡೋಸ್ಗಳನ್ನು ನೀಡಲಾಗಿದ್ದು, ಇದು ಜಗತ್ತನ್ನು ಅಚ್ಚರಿಗೊಳಿಸಿದೆ. ನಿಮ್ಮ ಬೆಂಬಲದಿಂದ ಇದು ಸಾಧ್ಯವಾಗಿದೆ ಎಂದು ಮೋದಿ ಹೇಳಿದರು.
ಭೂಮಿ ತಾಯಿಯನ್ನು ಉಳಿಸುವ ಅಗತ್ಯವಿದೆ. ಹೀಗಾಗಿ ಗುಜರಾತ್ ನ ಪ್ರತಿಯೊಂದು ಹಳ್ಳಿಯ ರೈತರು ನೈಸರ್ಗಿಕ ಕೃಷಿಗೆ ಮುಂದಾಗಬೇಕು ಎಂದರು.
ಭಾರತದ ಸ್ವಾತಂತ್ರ್ಯದ 75ನೇ ವರ್ಷದಲ್ಲಿ ಆಯೋಜಿಸಲಾಗುತ್ತಿರುವ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಜಿಲ್ಲೆಯಲ್ಲಿ 75 ಅಮೃತ ಸರೋವರಗಳನ್ನು (ಕೆರೆಗಳು) ರಚಿಸುವಲ್ಲಿ ಭಾಗವಹಿಸುವಂತೆ ಅವರು ಕೇಳಿಕೊಂಡರು.