ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎಂಟನೇ ವರ್ಷಾಚರಣೆಯ ಅಂಗವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಸಚಿವರು ಮತ್ತು ಬಿಜೆಪಿಯ ಚುನಾಯಿತ ಪ್ರತಿನಿಧಿಗಳು ಬೃಹತ್ ಸಾರ್ವಜನಿಕ ಪ್ರಚಾರ ಅಭಿಯಾನ ನಡೆಸಲಿದ್ದು, ಬಡವರ ಕಲ್ಯಾಣ ಯೋಜನೆಗಳು ಮತ್ತು ಉತ್ತಮ ಆಡಳಿತದ ಆದ್ಯತೆಗಳನ್ನು ಜನತೆಗೆ ತಿಳಿಸಲಿದ್ದಾರೆ ಎಂದು ಕೇಸರಿ ಪಕ್ಷ ಶನಿವಾರ ಹೇಳಿದೆ.
ಇಂದು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಪ್ರಧಾನಿ ನರೇಂದ್ರ ಮೋದಿ ಅವರು "ವಿಶ್ವಾಸಾರ್ಹ, ಜನಪ್ರಿಯ, ನಿರ್ಣಾಯಕ, ತ್ಯಾಗ ಮತ್ತು ತಪಸ್ವಿ ನಾಯಕ" ಎಂದು ಶ್ಲಾಘಿಸಿದರು. ಅಲ್ಲದೆ ಇಡೀ ದೇಶ ಅವರೊಂದಿಗೆ ನಿಂತಿದೆ ಎಂದು ಹೇಳಿದರು.
ಮೇ 30ರಿಂದ ಹದಿನೈದು ದಿನಗಳ ಕಾಲ ಬಿಜೆಪಿ ಮೋದಿ ಸರ್ಕಾರದ ಎಂಟನೇ ವರ್ಷಾಚರಣೆಯನ್ನು ಆಚರಿಸಲಿದೆ ಎಂದು ಅರುಣ್ ಸಿಂಗ್ ತಿಳಿಸಿದರು.
"ಮೇ 30 ರಿಂದ ಜೂನ್ 14 ರವರೆಗೆ ಬಿಜೆಪಿ, ಸರ್ಕಾರದ ಕಾರ್ಯ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣ ಯೋಜನೆಗಳ ಬಗ್ಗೆ ಜನತೆಗೆ ತಿಳಿಸಲು ಹದಿನೈದು ದಿನಗಳ ಕಾಲ ದೇಶಾದ್ಯಂತ ಸಾರ್ವಜನಿಕ ಸಭೆಗಳನ್ನು ಆಯೋಜಿಸುತ್ತಿದೆ. ಏಕೆಂದರೆ ಇದು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಆದ್ಯತೆಯಾಗಿದೆ" ಎಂದು ಸಿಂಗ್ ಹೇಳಿದ್ದಾರೆ.
ಈ ಅಭಿಯಾನದ ಭಾಗವಾಗಿ ಬೂತ್ನಿಂದ ರಾಷ್ಟ್ರಮಟ್ಟದವರೆಗೆ 75 ಗಂಟೆಗಳ ಜನಸಂಪರ್ಕ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಇದರಲ್ಲಿ ಎಲ್ಲಾ ಕೇಂದ್ರ ಸಚಿವರು, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳ ಸಚಿವರು ಮತ್ತು ಚುನಾಯಿತ ಪ್ರತಿನಿಧಿಗಳು ಭಾಗವಹಿಸಿ ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ ಎಂದು ಅವರು ಹೇಳಿದರು.