ಬೆಂಗಳೂರು: ದೇಶಾದ್ಯಂತ ಕೋವಿಡ್ 4ನೇ ಅಲೆಯ ಭೀತಿಯ ನಡುವೆ ಈಗಾಗಲೇ ಶಾಲಾ-ಕಾಲೇಜುಗಳು ಆರಂಭವಾಗಿವೆ. 2020ರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ನಂತರ ಸುಮಾರು 2 ವರ್ಷಗಳ ಕಾಲ ಸರಿಯಾಗಿ ಶಾಲಾ-ಕಾಲೇಜುಗಳು ಭೌತಿಕವಾಗಿ ನಡೆದಿರಲಿಲ್ಲ.
ಇದೀಗ ಮತ್ತೆ ಶಾಲೆಗಳು ಆರಂಭವಾದ ಖುಷಿಯ ಮಧ್ಯೆ ಕಹಿ ಬೇಸರದ ಸುದ್ದಿ ಹೊರಬಂದಿದೆ. ಬೆಂಗಳೂರಿನಲ್ಲಿ ಕೊರೋನಾ ಸೊಂಕಿನ (Coronavirus) ಪ್ರಕರಣಗಳು ಹೆಚ್ಚಾಗುತ್ತಿರುವುದರ ಮಧ್ಯೆ ಎರಡು ಖಾಸಗಿ ಶಾಲೆಯ ಮಕ್ಕಳಿಗೆ ಸೋಂಕು ತಗುಲಿರುವುದು ಶಾಲೆಗಳಲ್ಲಿ ಶಿಕ್ಷಕರು, ಶಾಲಾ ಆಡಳಿತ ಮಂಡಳಿ, ಪೋಷಕರಲ್ಲಿ ತೀವ್ರ ಆತಂಕವನ್ನುಂಟುಮಾಡಿದೆ.
ನಗರದ ದಾಸರಹಳ್ಳಿಯ ಎರಡು ಖಾಸಗಿ ಶಾಲೆಗಳ ಮಕ್ಕಳಿಗೆ ಕೊರೋನಾ ವಕ್ಕರಿಸಿದೆ. ಬಿಬಿಎಂಪಿಯ ದಾಸರಹಳ್ಳಿ ವಲಯದ (Dasarahalli, Bangalore) ಎರಡು ಶಾಲೆಯ ಒಟ್ಟು 31 ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು (Coronavirus) ಕಾಣಿಸಿಕೊಂಡಿದೆ. ಸೋಂಕಿತರು ಪತ್ತೆಯಾದ ತರಗತಿಯ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ. ದಾಸರಹಳ್ಳಿ ವಲಯದ ಪೀಣ್ಯ ಎರಡನೇ ಹಂತದ ಖಾಸಗಿ ಶಾಲೆಯ 5ನೇ ತರಗತಿಯ 10 ವಿದ್ಯಾರ್ಥಿಗಳಿಗೆ ಸೋಮವಾರ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಕಳೆದ ಗುರುವಾರ ರಾಜಗೋಪಾಲ ನಗರದ ಖಾಸಗಿ ಶಾಲೆಯ 5 ಮತ್ತು 6ನೇ ತರಗತಿಯ ಒಟ್ಟು 21 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿತ್ತು.
ಉಳಿದ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಇತರೆ ಸಿಬ್ಬಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಕೊಠಡಿ ಹಾಗೂ ಆವರಣಕ್ಕೆ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಿ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ನಿಗಾ ವಹಿಸಲಾಗುತ್ತಿದೆ ಎಂದು ದಾಸರಹಳ್ಳಿ ವಲಯದ ಆರೋಗ್ಯ ವೈದ್ಯಾಧಿಕಾರಿ ಸುರೇಶ್ ರುದ್ರಪ್ಪ ಮಾಹಿತಿ ನೀಡಿದ್ದಾರೆ.
ಆರೋಗ್ಯ ಸಚಿವರ ಹೇಳಿಕೆ: ಈ ಬಗ್ಗೆ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಪ್ರತಿಕ್ರಿಯಿಸಿದ್ದು, ಮಕ್ಕಳಿಗೆ ಸೋಂಕು ಬಂದು ಕೂಡಲೇ ಆತಂಕಗೊಳಗಾಗುವ ಅವಶ್ಯಕತೆಯಿಲ್ಲ. 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಎಷ್ಟು ಲಸಿಕೆ ಆಗಿದೆ ಮಾಹಿತಿ ಪಡೆಯುತ್ತಿದ್ದೇವೆ. 15 ವರ್ಷ ಮೇಲ್ಪಟ್ಟರಿಗೂ ಲಸಿಕೆ ನೀಡಲಾಗುತ್ತಿದೆ. ಸೋಂಕು ಬಂದ ಕೂಡಲೇ ಶಾಲೆಯನ್ನು ಕೆಲ ದಿನಗಳವರೆಗೆ ಮುಚ್ಚಬೇಕು ಎಂದರು.
ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸಿ, ಸೋಂಕು ಬಂದ ಮಕ್ಕಳಿಗೆ ಹೆಚ್ಚು ಸಮಸ್ಯೆ ಆಗೊಲ್ಲ. ಯಾರು ಆಂತಕ ಆಗೋದು ಬೇಡ..ಓಮಿಕ್ರಾನ್ ಉಪತಳಿ ಇದು. ಹೊಸ ಒಮಿಕ್ರಾನ್ ಉಪ ತಳಿ ನಮ್ಮಲ್ಲಿ ಪತ್ತೆ ಆಗಿಲ್ಲ. ಮಕ್ಕಳಿಗೆ ಸೋಂಕು ಬಂದರೆ ಆತಂಕ ಆಗೋದು ಸಹಜ. ಆದ್ರೆ ಯಾರು ಹೆಚ್ಚು ಆತಂಕ ಆಗೋದು ಬೇಡ. ಗಾಬರಿ ಆಗೋದು ಬೇಡ ಎಂದು ತಿಳಿಸಿದರು.
ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 21ಕ್ಕೇರಿಕೆ: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾದರೂ ಕಂಟೈನ್ಮೆಂಟ್ ವಲಯಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಒಟ್ಟು ಕಂಟೈನ್ಮೆಂಟ್ ವಲಯಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಮಹದೇವಪುರ ವಲಯದಲ್ಲಿ ನಾಲ್ಕು ಹಾಗೂ ದಾಸರಹಳ್ಳಿ ವಲಯದಲ್ಲಿ ಒಂದು ಹೊಸದಾಗಿ ಕಂಟೈನ್ಮೆಂಟ್ ವಲಯ ಸೃಷ್ಟಿಯಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.