ನವದೆಹಲಿ: ಸಾಮಾಜಿಕ ಮಾಧ್ಯಮಗಳ ಕುಂದು ಕೊರತೆ ಅಧಿಕಾರಿಗಳು ನೀಡುವ ತೀರ್ಪಿನ ವಿರುದ್ದ ಸಲ್ಲಿಕೆಯಾಗುವ ಅರ್ಜಿಗಳ ವಿಚಾರಣೆಗಾಗಿ ಕೇಂದ್ರ ಸರ್ಕಾರ ಮೇಲ್ಮನವಿ ಸಮಿತಿಯೊಂದನ್ನು ರಚಿಸಲು ಮುಂದಾಗಿದೆ.
0
samarasasudhi
ಜೂನ್ 03, 2022
ನವದೆಹಲಿ: ಸಾಮಾಜಿಕ ಮಾಧ್ಯಮಗಳ ಕುಂದು ಕೊರತೆ ಅಧಿಕಾರಿಗಳು ನೀಡುವ ತೀರ್ಪಿನ ವಿರುದ್ದ ಸಲ್ಲಿಕೆಯಾಗುವ ಅರ್ಜಿಗಳ ವಿಚಾರಣೆಗಾಗಿ ಕೇಂದ್ರ ಸರ್ಕಾರ ಮೇಲ್ಮನವಿ ಸಮಿತಿಯೊಂದನ್ನು ರಚಿಸಲು ಮುಂದಾಗಿದೆ.
ಈ ಸಂಬಂಧ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ಸಂಹಿತೆ) ನಿಯಮಗಳು- 2021ಕ್ಕೆ ತಿದ್ದುಪಡಿ ತರಲು ಉದ್ದೇಶಿಸಿದೆ.
ಮಾರ್ಗಸೂಚಿಗಳ ಉಲ್ಲಂಘನೆ ಕಾರಣ ನೀಡಿ, ಕೆಲ ಸಾಮಾಜಿಕ ಮಾಧ್ಯಮಗಳು ಗಣ್ಯರು ಸೇರಿದಂತೆ ಅನೇಕ ಬಳಕೆದಾರರ ಖಾತೆಗಳನ್ನು ಸ್ಥಗಿತಗೊಳಿಸಿರುವ ನಿದರ್ಶನಗಳಿವೆ. ಹೀಗಾಗಿ, ಕುಂದುಕೊರತೆ ಮೇಲ್ಮನವಿ ಸಮಿತಿ ರಚಿಸುವ ಕೇಂದ್ರದ ಪ್ರಸ್ತಾವಕ್ಕೆ ಈಗ ಮಹತ್ವದ ಬಂದಿದೆ.
'ಸಾಮಾಜಿಕ ಮಾಧ್ಯಮ ವೇದಿಕೆಗಳ ಕುಂದುಕೊರತೆ ಅಧಿಕಾರಿಗಳ ವಿರುದ್ಧದ ದೂರುಗಳನ್ನು ಸ್ವೀಕರಿಸಿದ 30 ದಿನಗಳ ಒಳಗಾಗಿ ಮೇಲ್ಮನವಿ ಸಮಿತಿಯು ಅವುಗಳನ್ನು ಇತ್ಯರ್ಥಪಡಿಸಬೇಕು. ಸಮಿತಿ ನೀಡುವ ತೀರ್ಪಿಗೆ ಸಾಮಾಜಿಕ ಮಾಧ್ಯಮಗಳ ಮಧ್ಯವರ್ತಿಗಳು ಅಥವಾ ಕಂಪನಿಗಳು ಬದ್ಧರಾಗಿರಬೇಕು' ಎಂದು ನಿಯಮಗಳ ತಿದ್ದುಪಡಿಗೆ ಸಂಬಂಧಿಸಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಹೊರಡಿಸಲಾಗಿರುವ ಕರಡು ಅಧಿಸೂಚನೆಯಲ್ಲಿ ತಿಳಿಸಿದೆ.
'ಕೇಂದ್ರ ಸರ್ಕಾರವು ಒಂದು ಅಥವಾ ಅದಕ್ಕಿಂತ ಹೆಚ್ಚು ಕುಂದುಕೊರತೆ ಮೇಲ್ಮನವಿ ಸಮಿತಿಗಳನ್ನು ರಚಿಸಬಹುದು. ಯಾವುದೇ ವ್ಯಕ್ತಿ, ಸಾಮಾಜಿಕ ಮಾಧ್ಯಮ ವೇದಿಕೆಗಳ ಕುಂದುಕೊರತೆ ಅಧಿಕಾರಿಯ ತೀರ್ಮಾನದ ವಿರುದ್ಧ, ಆದೇಶದ ಪ್ರತಿ ಕೈಸೇರಿದ 30 ದಿನಗಳ ಒಳಗಾಗಿ ಮೇಲ್ಮನವಿ ಸಲ್ಲಿಸಬಹುದು' ಎಂದು ತಿಳಿಸಲಾಗಿದೆ.