ತಿರುವನಂತಪುರ: ಸಿಲ್ವರ್ ಲೈನ್ ವಿರುದ್ಧ ಸಾರ್ವಜನಿಕರ ಆಕ್ರೋಶ ಅವ್ಯಾಹತವಾಗಿ ಮುಂದುವರಿದಿದ್ದು, ಕೆ ರೈಲ್ ಹೊಸ ಕಾರ್ಯಕ್ರಮಕ್ಕೆ ಮುಂದಾಗಿದೆ. ನೇರ ಚರ್ಚೆಗೆ ತಯಾರಿ ನಡೆಯುತ್ತಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಯೋಜನೆಗೆ ಸಂಬಂಧಿಸಿದ ಅನುಮಾನಗಳಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಉತ್ತರಿಸಲಾಗುವುದು ಎನ್ನಲಾಗಿದೆ.
ಜೂನ್ 23 ರಂದು ಸಂಜೆ 4 ಗಂಟೆಯಿಂದ ಜನರು ಕೆ ರೈಲ್ನ ಫೇಸ್ಬುಕ್ ಮತ್ತು ಯೂಟ್ಯೂಬ್ ಪುಟಗಳಲ್ಲಿ ಕಾಮೆಂಟ್ ಮಾಡುವ ಮೂಲಕ ಪ್ರಶ್ನೆಗಳನ್ನು ಕೇಳಬಹುದು. ಕೆ ರೈಲ್ನ ವ್ಯವಸ್ಥಾಪಕ ನಿರ್ದೇಶಕ ವಿ ಅಜಿತ್ ಕುಮಾರ್ ಮತ್ತು ಸಿಸ್ಟ್ರಾ ಪ್ರಾಜೆಕ್ಟ್ ನಿರ್ದೇಶಕ ಎಂ ಸ್ವಯಂಭು ಲಿಂಗಂ ಸಾರ್ವಜನಿಕ ಪ್ರಶ್ನೆಗಳಿಗೆ ಉತ್ತರಿಸಲು ಲಭ್ಯವಿರುತ್ತಾರೆ ಎಂದು ಕೆ ರೈಲ್ ತಿಳಿಸಿದೆ.
ಈ ಕಾರ್ಯಕ್ರಮದ ಮೂಲಕ, ಕೆ ರೈಲ್ ಮತ್ತು ಸರ್ಕಾರವು ಕಾಸರಗೋಡು-ತಿರುವನಂತಪುರಂ ಸಿಲ್ವರ್ ಲೈನ್ ಸೆಮಿ ಹೈಸ್ಪೀಡ್ ರೈಲು ಯೋಜನೆಗೆ ಸಂಬಂಧಿಸಿದಂತೆ ಜನರ ಕಾಳಜಿ ಮತ್ತು ಕಳವಳಗಳನ್ನು ಪರಿಹರಿಸಲು ಮತ್ತು ಯೋಜನೆಗೆ ಜನರನ್ನು ಹತ್ತಿರಕ್ಕೆ ತರಲು ಆಶಿಸುತ್ತಿದೆ. ಪಿಣರಾಯಿ ಸರ್ಕಾರದ ಮಹತ್ವದ ಯೋಜನೆ ಎಂದೇ ಕರೆಸಿಕೊಳ್ಳುವ ಈ ಯೋಜನೆಯನ್ನು ಯಾವ ರೀತಿಯಲ್ಲಿ ಬೇಕಾದರೂ ಅನುಷ್ಠಾನಕ್ಕೆ ತರಲಾಗುವುದು ಎಂದು ರಾಜ್ಯ ಸರ್ಕಾರ ಹಠ ಹಿಡಿದಿದೆ.
ಕೇಂದ್ರ ಸರ್ಕಾರದ ಅನುಮತಿಯನ್ನೂ ಪಡೆಯದೆ ಕೆ.ರೈಲು ಅನುಷ್ಠಾನಕ್ಕೆ ಮುಂದಾಗಿರುವುದು ತೀವ್ರ ಪ್ರತಿಭಟನೆಗೆ ಕಾರಣವಾಗಿದೆ. ಆದರೆ ತೃಕ್ಕಾಕರ ಚುನಾವಣೆ ನಂತರ ಮುಖ್ಯಮಂತ್ರಿ ಧೋರಣೆ ಮೆತ್ತಗಾಗಿತ್ತು. ಕೇರಳಕ್ಕೆ ಕೇಂದ್ರದ ಒಪ್ಪಿಗೆ ಸಿಕ್ಕರೆ ಮಾತ್ರ ಯೋಜನೆ ಜಾರಿಯಾಗಲಿದೆ ಎಂದು ಮುಖ್ಯಮಂತ್ರಿಗಳು ಬಹಿರಂಗ ಹೇಳಿಕೆ ನೀಡಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.