ಬದಿಯಡ್ಕ: ಸಾಂಸಾರಿಕ ವಿಘಟನೆಗಳು ಆಧುನಿಕ ಶಿಕ್ಷಣ ವ್ಯವಸ್ಥೆಯ ಪ್ರತೀಕವೂ, ಫಲವೂ ಆಗಿದೆ. ಶಿಕ್ಷಣ ವ್ಯವಸ್ಥೆಯ ಜೊತೆಗೆ ಸಂಸ್ಕಾರವೂ ದೊರಕಿದಾಗ ಮಾತ್ರ ಬದುಕಿನ ಫಲ ಸಮೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಕತೆಗಾರ್ತಿ ಪಾರ್ವತಿ ಕೂಳಕ್ಕೋಡ್ಲು ಅವರ ಕತೆಗಳು ಬೆಳಕು ಚೆಲ್ಲುತ್ತಿವೆ. ಕುಟುಂಬಗಳಲ್ಲಿ ಬರುವ ಸಮಸ್ಯೆಗಳನ್ನೂ, ಅದಕ್ಕೆ ಪರಿಹಾರವನ್ನೂ ಅವರೇ ತಮ್ಮ ಕಥೆಗಳಲ್ಲಿ ಚೆನ್ನಾಗಿ ಸೂಚಿಸಿದ್ದಾರೆ ಎಂದು ಕತೆಗಾರ ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ ಹೇಳಿದರು.
ಅವರು ಇತ್ತೀಚೆಗೆ ಪೆರಡಾಲ ಗ್ರಾಮದ ಕೂಳಕ್ಕೋಡ್ಲು ಮನೆಯಲ್ಲಿ ಕತೆಗಾರ್ತಿ, ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತೆ, ಪಾರ್ವತಿ ಕೂಳಕ್ಕೋಡ್ಲು ಅವರ ಚೊಚ್ಚಲ ಕಥಾಸಂಕಲನ `ಕಿಟ್ಟಣ್ಣ'ವನ್ನು ಅನಾವರಣಗೊಳಿಸಿ ಮಾತನಾಡಿದರು.
ಮುಖ್ಯ ಅತಿಥಿ, ಕರ್ನಾಟಕ ಬ್ಯಾಂಕ್ ಎ.ಜಿ.ಎಂ.ಶ್ರೀನಿವಾಸ ದೇಶಪಾಂಡೆ ಶುಭಾಶಂಸನೆಗೈದು ತುಂಬಾ ವಿಷಮ ಸ್ಥಿತಿಗಳಲ್ಲಿ ಬದುಕು ವಿಕಸನಗೊಳ್ಳುವುದೇ ಒಂದು ವಿಸ್ಮಯ. ಅಂತಹ ಸಂದರ್ಭಗಳಲ್ಲಿ ಏಕತಾನತೆಯಿಂದ ಹೊರಬರಲು ಮನುಷ್ಯರು ಒಂದೋ ಮಾನಸಿಕ ಒತ್ತಡ್ಕ್ಕೆ ಒಳಗಾಗುತ್ತಾರೆ, ಇಲ್ಲವೇ ಚಿಂತನಾಶೀಲರೂ, ಸಾಹಸ ಪ್ರವೃತ್ತಿಯವರೂ ಆಗುತ್ತಾರೆ. ಆದರೆ ಕತೆ ಕಾವ್ಯ ಬರೆಯುವುದರಿಂದ ನಮ್ಮ ನಂತರವೂ ನಾವು ಅಮರರಾಗಬಹುದು ಎಂಬುದು ನಾವು ಕಂಡುಕೊಳ್ಳಬೇಕಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರಿನ ಪ್ರಖ್ಯಾತ ನ್ಯಾಯವಾದಿ ಎಂ.ವಿ.ಶಂಕರ ಭಟ್, ಹವ್ಯಕರ ವಲಸೆಯ ಕುರಿತು ಕತೆಗಾರರು ಕಾದಂಬರಿಕಾರರು ಹೆಚ್ಚಿನ ಅಧ್ಯಯನ ನಡೆಸಬೇಕಿದೆ ಎಂದು ಹೇಳಿದರು. ಲೇಖಕಿ ಪಾರ್ವತಿ ಕೂಳಕ್ಕೋಡ್ಲು ಪ್ರಸ್ತಾವಿಕವಾಗಿ ಮಾತನಾಡಿದರು. ಅಹನ ಭಟ್ ಮುನಿಯಂಗಳ ಪ್ರಾರ್ಥಿಸಿದರು. ಸುಪ್ರಭ ವೆಂಕಟರಾಜ ಸ್ವಾಗತಿಸಿ, ಅನಿತಾ ಮಹೇಶ್ ವಂದಿಸಿದರು. ಗೋಪಾಲಕೃಷ್ಣ ಕುಂಟಿನಿ ಕಾರ್ಯಕ್ರಮ ಸಂಯೋಜಿಸಿದರು.