ಕೊಚ್ಚಿ: ಕಿರುಕುಳ ಪ್ರಕರಣದ ಕೋರ್ಟ್ ತೀರ್ಪು ಬರುವ ಮುನ್ನ ನಟ ವಿಜಯ್ ಬಾಬು ಅವರನ್ನು ಹೊರಹಾಕುವುದಿಲ್ಲ ಎಂದು ಕೇರಳದ ಚಿತ್ರನಿರ್ದೇಶಕರು, ನಿರ್ಮಾಪಕರು, ಕಲಾವಿದರ ಸಂಘಟನೆ "ಅಮ್ಮ" ದ(Association of Malayalam Movie Artists (A.M.M.A) ಅಧ್ಯಕ್ಷ ಇಡವೆಲ ಬಾಬು ಹೇಳಿದ್ದಾರೆ. ಕೊಚ್ಚಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯ ಬಳಿಕ ಅವರು ಮಾತನಾಡಿದರು. ನ್ಯಾಯಾಲಯದ ತೀರ್ಪು ಬರುವ ಮುನ್ನ ಆತುರದ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದಿರುವ ಅವರು, ಅಮ್ಮ ಕೇವಲ ಕ್ಲಬ್ ಆಗಿದ್ದು, ವಿಜಯ್ ಬಾಬು ಸದಸ್ಯರಾಗಿರುವ ಇತರೆ ಕ್ಲಬ್ ಗಳು ಹೊರಹಾಕಿಲ್ಲ ಎಂದು ಹೇಳಿದ್ದಾರೆ.
‘ನ್ಯಾಯಾಲಯದ ತೀರ್ಪಿಗಾಗಿ ನಾವೆಲ್ಲರೂ ಕಾಯುತ್ತಿದ್ದೇವೆ. ನ್ಯಾಯಾಲಯ ಹೇಳಲಿ. ವಿಜಯ್ ಬಾಬು ಕೊಚ್ಚಿಯ ಎಂಟು ಅಥವಾ ಒಂಬತ್ತು ಕ್ಲಬ್ಗಳ ಸದಸ್ಯರಾಗಿದ್ದಾರೆ. ಅವರನ್ನು ಅಲ್ಲಿಂದ ಹೊರಹಾಕಲಾಗಿಲ್ಲ. ಅಮ್ಮ ಸಂಘಟನೆ ವಾಸ್ತವವಾಗಿ ಕ್ಲಬ್ ಆಗಿದೆ. ಕೋರ್ಟ್ ತೀರ್ಪು ಬರಲಿ. ಬಳಿಕ ನ್ಯಾಯಾಲಯದ ಆದೇಶದಂತೆ ‘ಅಮ್ಮ’ ಕಾರ್ಯನಿರ್ವಹಿಸಲಿದೆ ಎಂದೂ ಬಾಬು ಹೇಳಿದ್ದಾರೆ.
ಕಿರುಕುಳ ಪ್ರಕರಣದಲ್ಲಿ ಆರೋಪಿಯಾದ ನಂತರ ಅಮ್ಮದ ಕಾರ್ಯಕಾರಿಣಿಯಿಂದ ದೂರ ಉಳಿಯಬಹುದು ಎಂದು ವಿಜಯ್ ಬಾಬು ಹೇಳಿದ್ದರು. ಕಾರ್ಯಕಾರಿ ಸಮಿತಿಯಿಂದ ಹೊರಬಂದರೂ ಸಂಘಟನೆಯ ಸದಸ್ಯರಾಗಿ ನಿನ್ನೆಯ ಅಮ್ಮದ ಸಭೆಯಲ್ಲಿ ಪಾಲ್ಗೊಂಡಿದ್ದರು.
ಈ ಹಿಂದೆ ಕಿರುಕುಳದ ದೂರಿನ ಮೇಲೆ ವಿಜಯ್ ವಿರುದ್ಧ ಕ್ರಮ ಕೈಗೊಳ್ಳದಿರುವುದನ್ನು ವಿರೋಧಿಸಿ ಕೆಲವು ನಟಿಯರು ಅಮ್ಮ ಸಂಘಟನೆಯ ಆಂತರಿಕ ದೂರು ನಿವಾರಣಾ ಸಮಿತಿಗೆ ರಾಜೀನಾಮೆ ನೀಡಿದ್ದರು. ಶ್ವೇತಾ ಮೆನನ್, ಮಾಲಾ ಪಾರ್ವತಿ ಮತ್ತು ಕುಕು ಪರಮೇಶ್ವರನ್ ರಾಜೀನಾಮೆ ನೀಡಿದ್ದಾರೆ.