ಕಾಸರಗೋಡು: ಜಿಲ್ಲೆಯ ವಿವಿಧೆಡೆ ಎಚ್1 ಎನ್1 ರೋಗಬಾಧೆ ಕಂಡುಬರಲಾರಂಭಿಸಿದ್ದು, ಜನತೆ ಜಾಗ್ರತೆ ಪಾಲಿಸುವಂತೆ ಜಿಲ್ಲಾ ವೈದ್ಯಾಧಿಕಾರಿ ಡಾ. ಎ.ವಿ.ರಾಮದಾಸ್ ಮಾಹಿತಿ ನೀಡಿದ್ದಾರೆ.
ಎಚ್1 ಎನ್1 ಎಂಬುದು ಇನ್ಫ್ಲುವೆನ್ಸಾ ಎ ಎಂಬ ಗುಂಪಿಗೆ ಸೇರಿದ ವೈರಸ್ ಆಗಿದ್ದು, ಇದು ಸಾಮಾನ್ಯವಾಗಿ ಹಂದಿಗಳಲ್ಲಿ ಕಂಡುಬರುತ್ತದೆ. ಹಂದಿಗಳ ಜೊತೆ ನಿಕಟ ಸಂಪರ್ಕದಲ್ಲಿರುವವರಿಗೆ ರೋಗ ಹರಡುವ ಅಪಾಯ ಹೆಚ್ಚಾಗಿದೆ. ಈ ರೋಗಾಣುಗಳು ಗಾಳಿಯ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ.
ರೋಗಲಕ್ಷಣಗಳಿವು:
ಜ್ವರ, ದೇಹ ನೋವು, ಗಂಟಲು ನೋವು, ಕಫ ಇಲ್ಲದೆ ಒಣ ಕೆಮ್ಮು, ಆಯಾಸ, ಅತಿಸಾರ ಇವುಗಳು ಎಚ್1 ಎನ್1 ರೋಗದ ಪ್ರಮುಖ ಲಕ್ಷಣಗಳಾಗಿದೆ. ಬಹುತೇಕ ಮಂದಿ ಸಾಮಾನ್ಯ ಜ್ವರದಂತೆ ನಾಲ್ಕೈದು ದಿನಗಳಲ್ಲಿ ಗುಣಮುಖರಾಗುತ್ತಾರೆ. ಆದರೆ ಕೆಲವರಲ್ಲಿ ಕಾಯಿಲೆ ಗಂಭೀರವಾಗಬಹುದು. ಅದನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಬೇಕು. ಶ್ವಾಸಕೋಶದ ಸೋಂಕು, ಮಿದುಳಿನ ಸೋಂಕು ಮತ್ತು ಅಸ್ತಿತ್ವದಲ್ಲಿರುವ ಕಾಯಿಲೆಗಳು ಹೆಚ್ಚಾಗುವ ಸಾಧ್ಯತೆಯಿದೆ.
ರೋಗಿಯು ಸೀನುವುದರಿಂದ, ಕೆಮ್ಮಿದಾಗ ಅಥವಾ ಮೂಗು ಶುಚಿಗೊಳಿಸುವಾಗ ವೈರಸ್ ಗಾಳಿಯ ಮೂಲಕ ಹರಡುತ್ತದೆ. ವೈರಸ್ ಸುಮಾರು ಒಂದು ಮೀಟರ್ ವ್ಯಾಪ್ತಿಯಲ್ಲಿಹರಡಬಹುದು. ಪರಿಸರದಲ್ಲಿರುವ ವಸ್ತುಗಳ ಮೇಲೂ ವೈರಸ್ ಬದುಕಬಲ್ಲದು. ಅಂತಹ ವಸ್ತುಗಳನ್ನು ಮುಟ್ಟಿದ ನಂತರ ಕೈ ತೊಳೆಯದೆ ಕಣ್ಣು ಮತ್ತು ಮೂಗುಬಾಯಿಯನ್ನು ಸ್ಪರ್ಶಿಸುವುದರಿಂದ ಸಹ ಸೋಂಕು ಹರಡಲು ಕಾರಣವಾಗಬಹುದು.
ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, 65 ವರ್ಷಕ್ಕಿಂತ ಮೇಲ್ಪಟ್ಟವರು, ಗರ್ಭಿಣಿಯರು, ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಮತ್ತು ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವವರು ಹೆಚ್ಚಿನ ಜಾಗ್ರತೆ ಪಾಳಿಸುವಂತೆಯೂ ಸೂಚಿಸಲಾಗಿದೆ.
ರೋಗ ಪ್ರತಿರೋಧಕ್ಕಾಗಿ ಮಾಸ್ಕ್ ಧರಿಸುವುದು, ಸಾರ್ವಜನಿಕವಾಗಿ ಉಗುಳದಿರುವುದು, ಅನಾರೋಗ್ಯ ಪೀಡಿತರ ಜತೆ ಬೆರೆಯದಿರುವುದು ಜತೆಗೆ ಶುಚಿತ್ವ ಪಾಳಿಸುವಂತೆ ಸೂಚಿಸಲಾಗಿದೆ. ರೋಗಲಕ್ಷಣ ಕಂಡುಬಂದಲ್ಲಿ ಸ್ವಯಂ ಚಿಕಿತ್ಸೆ ಕೈಗೊಳ್ಳದೆ, ತಕ್ಷಣ ಸನಿಹದ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯಬೇಕು
ಎಚ್1ಎನ್1 ರೋಗಿಗಳ ಸಂಪರ್ಕದಲ್ಲಿದ್ದಲ್ಲಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ತೆರಳಿ ಎಚ್1ಎನ್1 ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದೂ ಸಊಚಿಸಲಾಗಿದೆ.





