ಗುಂಟೂರು: ಇತ್ತೀಚಿನ ದಿನಗಳಲ್ಲಿ ಸಾಲದ ಆಯಪ್ಗಳು ಮತ್ತು ಆನ್ಲೈನ್ ಜೂಜಾಟಗಳು ಬಡ ಮತ್ತು ಮಧ್ಯಮ ಕುಟುಂಬಗಳ ಕತ್ತು ಹಿಸುಕುತ್ತಿವೆ. ಆನ್ಲೈನ್ನಲ್ಲಿ ನಡೆಯುವ ಈ ವಂಚನೆಯ ಚಕ್ರವ್ಯೂಹಕ್ಕೆ ಸಿಲುಕಿ ಸಾಕಷ್ಟು ಮಂದಿ ಬಲಿಯಾಗುತ್ತಿದ್ದಾರೆ.
ತಾಜಾ ಬೆಳವಣಿಗೆ ಒಂದರಲ್ಲಿ ಸಾಲದ ಆಯಪ್ ಆಪರೇಟರ್ಗಳ ಕಿರುಕುಳವನ್ನು ಸಹಿಸಲಾರದೇ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ವಿವಾಹಿತೆಯೊಬ್ಬಳು ಸಾವಿನ ಹಾದಿ ಹಿಡಿದಿದ್ದಾಳೆ. ಸೋಮವಾರ ಈ ಘಟನೆ ನಡೆದಿದೆ.
ವಿವರಣೆಗೆ ಬರುವುದಾದರೆ, ಗುಂಟೂರು ಜಿಲ್ಲೆಯ ಮಂಗಳಗಿರಿ ಮಂಡಲದ ಚಿನ್ನಕಾಕನಿ ಗ್ರಾಮದ ನಿವಾಸಿ ಬಂಡಪಲ್ಲಿ ಪ್ರತ್ಯುಷಾ ಎಂಬುವರು ಇಂಡಿಯನ್ ಬುಲ್ಸ್ ಮತ್ತು ರುಪೆಕ್ಸ್ ಸಾಲದ ಆಯಪ್ನಲ್ಲಿ 20 ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದರು. ಇದಕ್ಕೆ ಅತ್ಯಧಿಕ ಬಡ್ಡಿದರ ವಿಧಿಸಿದ್ದ ಆಪರೇಟರ್ಗಳು ಪ್ರತ್ಯುಷಾರಿಂದ 2 ಲಕ್ಷ ರೂಪಾಯಿ ಹಣ ವಸೂಲಿ ಮಾಡಿದ್ದರು.
ಇಷ್ಟಾದರೂ ಸುಮ್ಮನಾಗದ ಆಯಪ್ ಏಜೆಂಟ್ಗಳು, ಪ್ರತ್ಯುಷಾ ಇನ್ನೂ ಸಾಲ ತೀರಿಸಿಲ್ಲ ಅಂತಾ ತಮ್ಮ ಸಾಮಾನ್ಯ ವಿಧಾನದಲ್ಲಿ ಸೈಬರ್ ಕ್ರಿಮಿನಲ್ ಚಟುವಟಿಕೆ ಮೂಲಕ ಆಕೆಯನ್ನು ಹೆದರಿಸಲು ಆರಂಭಿಸಿದರು. ಸಾಲ ಮರು ಪಾವತಿ ಮಾಡದಿದ್ದರೆ, ಸಂಬಂಧಿಕರಿಗೆ ಸಾಲದ ಮಾಹಿತಿ ನೀಡಲಾಗುವುದು ಎಂದು ಹೆದರಿಸಿದರು. ಅಲ್ಲದೆ, ವಾಟ್ಸ್ಆಯಪ್ ಮೂಲಕ ಅಶ್ಲೀಲ ಸಂದೇಶ ರವಾನಿಸಿದರು. ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ಫೋಟೋಗಳನ್ನು ಹರಿಬಿಡುವುದಾಗಿ ಬೆದರಿಸಿದರು.
ಆಯಪ್ ಏಜೆಂಟರ್ ನಿರಂತರ ಕಿರುಕುಳವನ್ನು ಸಹಿಸದ ಪ್ರತ್ಯುಷಾ ಸೋಮವಾರ (ಜು.11) ತಮ್ಮ ಮನೆಯ ಮೇಲಿರುವ ಫ್ಲೆಕ್ಸ್ ಹೋರ್ಡಿಂಗ್ ಫ್ರೇಮ್ಗೆ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಪಾಲಕರಿಗೆ ಮತ್ತು ಪತಿಗೆ ಸೆಲ್ಫಿ ವಿಡಿಯೋ ಮಾಡಿರುವ ಪ್ರತ್ಯಷಾ, ನಡೆದ ಎಲ್ಲ ಘಟನೆಯನ್ನು ವಿವರಿಸಿದ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ.
ವಿಡಿಯೋ ನೋಡಿದ ಪ್ರತ್ಯುಷಾ ಪತಿ, ಮಂಗಳಗಿರಿ ಪೊಲೀಸ್ ಠಾಣೆಗೆ ತೆರಳಿ ಸಾಲದ ಆಯಪ್ ಮತ್ತು ಏಜೆಂಟ್ಗಳ ವಿರುದ್ಧ ದೂರು ದಾಖಲಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಮತ್ತು ಐಟಿ ಕಾಯ್ದೆ ಅಡಿಯಲ್ಲಿರುವ ಸೂಕ್ತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.