ಉಪ್ಪಳ: ಪ್ರಬಲ ಕುಳಿರ್ಗಾಳಿಯಿಂದ ತೆಂಗಿನ ಮರವೊಂದು ಮೈಮೇಲೆ ಬಿದ್ದು ಬಾಲಕೋರ್ವ ಮೃತಪಟ್ಟ ದಾರುಣ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಪೈವಳಿಕೆ ಸಮೀಪದ ಕೊಂದಲಕಾಡು ನಿವಾಸಿ, ಡೈಜಿ ವಲ್ರ್ಡ್ ಮಾಧ್ಯಮದ ಜಿಲ್ಲಾ ವರದಿಗಾರ ಸ್ಟೀಫನ್ ಕ್ರಾಸ್ತಾ ಎಂಬವರ ಪುತ್ರ ಶೋನ್ ಅರನ್ ಕ್ರಾಸ್ತಾ(13) ದಾರುಣನಾಗಿ ಅಂತ್ಯಕಂಡ ಬಾಲಕ.
ಇಂದು ಮಧ್ಯಾಹ್ನ ಮನೆ ಸಮೀಪದಲ್ಲೇ ಈ ಘಟನೆ ನಡೆದಿದೆ. ತೋಟದಲ್ಲಿ ಕೇಳಿಬಂದ ಸದ್ದಿನ ಕಾರಣ ಹೊರತೆರಳಿದ ತಂದೆಯೊಂದಿಗೆ ಬಾಲಕನೂ ಹೊರಟಿದ್ದು ಈ ವೇಳೆ ಬೀಸಿದ ಕುಳಿರ್ಗಾಳಿಗೆ ಒಣಗಿದ್ದ ತೆಂಗಿನ ಮರ ಬಾಲಕನ ಮೈಮೇಲೆ ಬಿತ್ತೆಂದು ತಿಳಿದುಬಂದಿದೆ. ತೆಂಗಿನ ಮರ ಬಿದ್ದ ರಭಸಕ್ಕೆ ಬಾಲಕ ಮರದೆಡೆಯಲ್ಲಿ ಸಿಲುಕಿಕೊಂಡಿದ್ದುದು ಕಂಡುಬಂತು. ಬಳಿಕ ಸ್ಥಳೀಯರ ನೆರವಿಂದ ಹೊರತೆರೆದರೂ ಗಂಭೀರಗೊಂಡಿದ್ದ ಆತನನ್ನು ಬಳಿಕ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಜೀವ ಉಳಿಸಲು ಸಾಧ್ಯವಾಗಿಲ್ಲ. ಬಾಲಕ ಕಯ್ಯಾರು ಡೋನ್ ಬಾಸ್ಕೋ ಅನುದಾನಿತ ಶಾಲಾ ಏಳನೇ ತರಗತಿ ವಿದ್ಯಾರ್ಥಿಯಾಗಿದ್ದ. ಮೃತ ಬಾಲಕ ತಂದೆ, ತಾಯಿ ಅನಿತಾ ಹಾಗೂ ಸಹೋದರಿ ಸೋಣಲ್ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾನೆ.