ಕಾಸರಗೋಡು: ವಾರಗಳಿಂದ ಸುರಿಯುತ್ತಿರುವ ಭಾರೀ ಮಳೆ ಇಂದಿನಿಂದ ಒಂದಷ್ಟು ಕುಂಠಿತಗೊಂಡಿದ್ದು, ಜನ ಜೀವನ ಸಹಜ ಸ್ಥಿತಿಗೆ ಮರಳುವ ಭರವಸೆ ಮೂಡಿದ್ದು, ಹಲವೆಡೆ ಕಟ್ಟಿನಿಂತಿರುವ ಮಳೆ ನೀರು ನಿಧಾನವಾಗಿ ಕಡಿಮೆಯಾಗುತ್ತಿದೆ.
ಈ ಮಧ್ಯೆ ಶಾಲೆ, ಅಂಗನವಾಡಿಗಳು ನಾಳೆ ಮತ್ತೆ ಎಂದಿನಂತೆ ತೆರೆದು ಕಾರ್ಯಾಚರಿಸಲಿದೆ. ಕಳೆದ ಶುಕ್ರವಾರ, ಮೊನ್ನೆ ಮಂಗಳವಾರ ಹಾಗೂ ನಿನ್ನೆ ಭಾರೀ ಮಳೆಯ ಕಾರಣ ರಜೆ ಘೋಷಿಸಲಾಗಿತ್ತು. ಈ ಮೂರು ದಿನಗಳ ರಜೆಯನ್ನು ಮುಂದಿನ ದಿನಗಳಲ್ಲಿ ಸರಿಹೊದಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಆದರೆ ನಾಳೆ ಶಾಲೆ ಪುನರಾಂಭವಾಗುತ್ತಿರುವುದು ಹೌದಾದರೂ, ಅತೀವ ಜಾಗ್ರತೆಗೆ ಅಧಿಕೃತರು ಸೂಚನೆ ನೀಡಿದ್ದಾರೆ. ಪುಟಾಣಿ ಮಕ್ಕಳು ಮನೆಯಿಂದ ಶಾಲೆಗೆ ಸಂಚರಿಸುವಾಗ ನೇರವಾಗಿ ಶಾಲೆಗೇ ತೆರಳುವಂತೆ ಜಾಗ್ರತೆ ವಹಿಸಬೇಕಾಗಿದೆ. ಸಾಗುವ ದಾರಿಯ ಮಧ್ಯೆ ನೀರು ಕಟ್ಟಿನಿಂತಿರುವಲ್ಲಿ ಪ್ರವೇಶಿಸುವುದಾಗಲಿ, ಆಟವಾಡಲು ನೀರಿಗಿಳಿಯುವುದಾಗಲೀ ಮಾಡಬಾರದೆಂಬುದು ಮುಖ್ಯವಾದುದು. ರಸ್ತೆಯಲ್ಲಿ ಸಂಚರಿಸುವಾಗ ಮಳೆಯ ವೇಳೆ ಕೊಡೆ, ಬ್ಯಾಗ್ ಗಳನ್ನು ಸರಿಯಾಗಿ ಬಳಸುವ ಬಗ್ಗೆ ಪೋಷಕರು ಮತ್ತು ಶಿಕ್ಷಕರು ತಿಳಿಯಹೇಳುವ ಅಗತ್ಯವೂ ಇದೆ. ಬೀಳುವ ಸ್ಥಿತಿಯಲ್ಲಿರುವ ಮರದಡಿ ನಿಲ್ಲುವುದು, ನೇತಾಡುವುದು ಮಾಡದಂತೆ ಜಾಗ್ರತೆ ವಹಿಸಬೇಕಿದೆ. ಶೀತ, ಜ್ವರಗಳಿರುವ ಮಕ್ಕಳು ತರಗತಿಗೆ ಹಾಜರಾಗದಿರುವುದು ಉತ್ತಮ. ಜೊತೆಗೆ ಮುಖ, ಮೂಗನ್ನು ಒರೆಸಲು ಕಾಟನ್ ಟವೆಲ್ ನ್ನು ಮಕ್ಕಳಿಗೆ ನೀಡಿದರೆ ಉತ್ತಮ. ಅಲ್ಲದೆ ತಣ್ಣಗಿನ ನೀರು ಕುಡಿಯುವುದು, ಐಸ್ ಕ್ರೀಂ, ಚಾಕಲೇಟ್ ಗಳನ್ನು ಒಂದಷ್ಟು ಕಾಲ ನಿಬರ್ಂಧಿಸಬೇಕು. ಬಿಸಿಯಾದ ಆಹಾರ ಪದಾರ್ಥಗಳನ್ನು ಸೇವಿಸಲು ಆರೋಗ್ಯ ಇಲಾಖೆ ಪ್ರತ್ಯೇಕ ಸೂಚನೆ ನೀಡಿದೆ. ಶಾಲೆಯಲ್ಲಿ ಊಟ ಮಾಡುವ ಮೊದಲು ಕೈ, ಬಾಯಿ, ಸೇವಿಸುವ ಬಟ್ಟಲನ್ನು ಸಾಬೂನು ಬಳಸಿ ತೊಳೆಯುವುದು ಮರೆಯಬಾರದು.
ಶಾಲಾ ಚೀಲಗಳ ಪುಸ್ತಕಗಳು ನೆನೆಯದಂತೆ ಚೀಲದೊಳಗೆ ಬಹು ಬಳಕೆಯ ಪ್ಲಾಸ್ಟಿಕ್ ಕವರನ್ನು ಬಳಸುವುದು ಉತ್ತಮ. ಕಾಲುಗಳಿಗೆ ಕೆಸರಾಗದಂತೆ ತೊಳೆದುಕೊಳ್ಳಲು ಮಕ್ಕಳಿಗೆ ಸೂಚಿಸಬೇಕು.