ಪಾಲಕ್ಕಾಡ್ :ಪಾಲಕ್ಕಾಡ್ ಮೂಲದ ಯುವತಿ, ನಾಯಿ ಕಡಿತಕ್ಕೆ ಒಳಗಾಗಿ ಲಸಿಕೆ ಪಡೆದರು ಮೃತಪಟ್ಟ ಸಂಗತಿ ಅಲ್ಲಿನ ಆರೋಗ್ಯ ಇಲಾಖೆಗೆ ಭಾರೀ ಚರ್ಚಿತ ವಿಷಯವಾಗಿತ್ತು. ಇದೀಗ ತನಿಖೆಯ ಬಳಿಕ ಅಸಲಿ ಕಾರಣ ಏನೆಂಬುದು ಬಯಲಾಗಿದೆ. ನಾಯಿ ಜೋರಾಗಿ ಕಡಿದಿದ್ದರಿಂದ ಉಂಟಾದ ಆಳವಾದ ಗಾಯವೇ ರೇಬಿಸ್ಗೆ ಕಾರಣ ಎಂದು ಪಲಕ್ಕಾಡ್ ಡಿಎಂಒ ಕೆ.ಪಿ.ರಿತಾ ಹೇಳಿದ್ದಾರೆ.
ಲಸಿಕೆ ನೀಡಿರುವುದರಲ್ಲಿ ಯಾವುದೇ ಎಡವಟ್ಟುಗಳಾಗಿಲ್ಲ, ಮೃತ ಶ್ರೀಲಕ್ಷ್ಮಿಗೆ ಗುಣಮಟ್ಟದ ಲಸಿಕೆಯನ್ನೇ ನೀಡಲಾಗಿದೆ ಎಂದು ರೀತಾ ತಿಳಿಸಿದ್ದಾರೆ.
ಪಾಲಕ್ಕಾಡ್ ಮೂಲದ ಸುಗುನನ್ ಮತ್ತು ಸಿಂಧು ದಂಪತಿಯ ಪುತ್ರಿ ಶ್ರೀಲಕ್ಷ್ಮಿ (18) ಮೇ 30ರಂದು ಬೆಳಗ್ಗೆ ಕಾಲೇಜಿಗೆ ಹೋಗುವಾಗ ಅವರ ಪಕ್ಕದ ಮನೆಯ ನಾಯಿ ಆಕೆಯ ಎಡಗೈ ಕೈಬೆರಳುಗಳಿಗೆ ಕಚ್ಚಿತ್ತು. ಇದಾದ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ಇಲಾಖೆಯಿಂದ ಎಲ್ಲ ರೀತಿಯ ಲಸಿಕೆಯನ್ನು ಶ್ರೀಲಕ್ಷ್ಮಿ ಪಡೆದುಕೊಂಡಿದ್ದಳು.
ಲಸಿಕೆ ಪಡೆದುಕೊಂಡರೂ ಕೆಲವು ದಿನಗಳ ಬಳಿಕ ಜ್ವರ ಕಾಣಿಸಿಕೊಂಡಿತು. ತಕ್ಷಣ ಶ್ರೀಲಕ್ಷ್ಮಿಯನ್ನು ಖಾಸಗಿ ಆಸ್ಪತ್ರೆಗೆ ಕೊರೆದೊಯ್ಯಲಾಯಿತು. ಈ ವೇಳೆ ಪರೀಕ್ಷಿಸಿದಾಗ ರೇಬೀಸ್ ಕಾಯಿಲೆಯ ಲಕ್ಷಣಗಳು ಕಂಡುಬಂದಿತು. ತಕ್ಷಣ ಆಕೆಯನ್ನು ತ್ರಿಸ್ಸೂರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಗುರುವಾರ (ಜೂನ್ 30) ಬೆಳಗ್ಗೆ ಕೊನೆಯುಸಿರೆಳೆದಿದ್ದಾಳೆ.
ಆರೋಗ್ಯ ಸಚಿವರ ಸೂಚನೆ ಮೇರೆಗೆ ತನಿಖೆಗಾಗಿ ರಚಿಸಲಾಗಿದ್ದ ಕ್ಷಿಪ್ರ ಪ್ರತಿಕ್ರಿಯೆ ತಂಡ ಶುಕ್ರವಾರ ಸಭೆ ನಡೆಸಿತು. ಸಭೆಯಲ್ಲಿ ಶ್ರೀಲಕ್ಷ್ಮಿಗೆ ನೀಡಿದ ಚಿಕಿತ್ಸೆಯ ವಿವರಗಳನ್ನು ಪರಿಶೀಲಿಸಲಾಯಿತು. ಶ್ರೀಲಕ್ಷ್ಮಿಗೆ ಕಚ್ಚಿದ ಸಾಕು ನಾಯಿಗೆ ಲಸಿಕೆ ಹಾಕಿಲ್ಲ ಎಂಬುದು ಈ ವೇಳೆ ತಿಳಿದುಬಂದಿದೆ. ಅಲ್ಲದೆ, ಅದೇ ನಾಯಿ ಹಿಂದೊಮ್ಮೆ ತನ್ನ ಮಾಲೀಕರಿಗೂ ಕಚ್ಚಿರುವ ಸಂಗತಿ ಬಯಲಾಗಿದೆ. ಮಾಲೀಕ ಲಸಿಕೆ ಪಡೆದುಕೊಂಡಿದ್ದು, ಅದು ಕೆಲಸ ಮಾಡಿದೆ. ಆದರೆ, ಶ್ರೀಲಕ್ಷ್ಮಿಗೆ ಲಸಿಕೆ ಪರಿಣಾಮ ಬೀರಿಲ್ಲ.
ಶ್ರೀಲಕ್ಷ್ಮಿಗೆ ಲಸಿಕ ಯಾಕೆ ಪ್ರಯೋಜನವಾಗಲಿಲ್ಲ ಎಂದು ಪರಿಶೀಲಿಸಿದಾಗ ನಾಯಿಯ ಕಡಿತ ಆಳವಾಗಿದ್ದರಿಂದ ರೇಬಿಸ್ನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ಸದ್ಯ ಆರೋಗ್ಯ ಕಾರ್ಯಕರ್ತರು ಶ್ರೀಲಕ್ಷ್ಮಿ ಅವರ ಮನೆಗೆ ಬಂದು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಬಾಲಕಿ ಮತ್ತು ನಾಯಿಯ ಸಂಪರ್ಕಕ್ಕೆ ಬಂದವರಿಗೆ ಲಸಿಕೆ ಹಾಕುತ್ತಿದ್ದಾರೆ. ಚಿಕಿತ್ಸೆ ವೇಳೆ ಸಣ್ಣಪುಟ್ಟ ಗಾಯ ಮಾಡಿಕೊಂಡಿದ್ದ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರಿಗೂ ಲಸಿಕೆ ನೀಡಲಾಗಿದೆ.