ಕಾಸರಗೋಡು: ಬೀದಿ ನಾಯಿಗಳ ವಿರುದ್ಧ ಕಾರ್ಯಾಚರಣೆ ವಾರ್ಡ್ ಮಟ್ಟದಲ್ಲಿ ಬಲಪಡಿಸಲು, ಸಾರ್ವಜನಿಕ ಸಹಕಾರದೊಂದಿಗೆ ಹಾಟ್ಸ್ಪಾಟ್ಗಳನ್ನು ಗುರುತಿಸಲು ಮತ್ತು ಬೀದಿ ನಾಯಿಗಳಿಗೆ ಸಮಗ್ರ ಲಸಿಕೆ ಅಭಿಯಾನವನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ಈ ಬಗ್ಗೆ ಕಾಞಂಗಾಡು ಬ್ಲಾಕ್ ಪಂಚಾಯಿತಿ ವತಿಯಿಂದ ನಡೆಸಲಾದ ಒಂದು ದಿನದ ಕಾರ್ಯಾಗಾರ 'ಸುರಕ್ಷಾ'ದಲ್ಲಿ ವಾರ್ಡ್ ಮಟ್ಟದ ಯೋಜನೆಗೆ ರೂಪು ನೀಡಲಾಯಿತು. ಕಾಞಂಗಾಡು ಬ್ಲಾಕ್ನ ಸಂಚಾರಿ ಪಶು ಚಿಕಿತ್ಸಾಲಯದ ಸೇವೆಯನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುವುದು.
ಸಾಕು ನಾಯಿಗಳಿಗೆ ಪರವಾನಗಿ ಕೂಡ ಕಡ್ಡಾಯವಾಗಲಿದೆ. ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಕೆ.ಮಣಿಕಂಠನ್ ಕಾರ್ಯಾಗಾರ ಉದ್ಘಾಟಿಸಿದರು. ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಕೆ.ವಿ.ಶ್ರೀಲತಾ ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡು ಬ್ಲಾಕ್ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತ್ ಅಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು, ಪಂಚಾಯತ್ ಕಾರ್ಯದರ್ಶಿಗಳು, ವೈದ್ಯಾಧಿಕಾರಿಗಳು, ಕಾಞಂಗಾಡು ಬ್ಲಾಕ್ ಪಂಚಾಯತ್ ಅಧೀನದಲ್ಲಿರುವ ಪಶು ಸಂಗೋಪನಾ ವೈದ್ಯರು, ಅಧಿಕಾರಿಗಳು, ರಾಜಕೀಯ ಪಕ್ಷದ ಪ್ರತಿನಿಧಿಗಳು, ಸಿಡಿಎಸ್ ಅಧ್ಯಕ್ಷರು, ಪಂಚಾಯತ್ ಯುವ ಸಮನ್ವಯಾಧಿಕಾರಿಗಳು, ಯುವಕ ಮಂಡಲದ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಬ್ಲಾಕ್ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಹಿರಿಯ ಪಶು ವೈದ್ಯಾಧಿಕಾರಿ ಮುಹಮ್ಮದ್ ಆಸಿಫ್ ಅವರು ಹುಚ್ಚುನಾಯಿ ರೋಗ ತಡೆಗಟ್ಟುವ ವಿಧಾನಗಳು ಎಂಬ ವಿಷಯದ ಕುರಿತು ತರಗತಿ ನಡೆಸಿದರು. ಪುಲ್ಲೂರು ಪೆರಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಕೆ.ಅರವಿಂದಾಕ್ಷನ್, ಉದುಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಲಕ್ಷ್ಮಿ, ಪಳ್ಳಿಕ್ಕರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕುಮಾರನ್, ಬ್ಲಾಕ್ಪಂಚಾಯಿತಿ ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು. ಬ್ಲಾಕ್ ಪಂಚಾಯಿತಿ ಕಾರ್ಯದರ್ಶಿ ಪಿ.ಯುಜಿನ್ ಸ್ವಾಗತಿಸಿದರು. ಟಿ.ಕೆ.ಹರಿಹರನ್ ವಂದಿಸಿದರು.