ನವದೆಹಲಿ: ದೇಶದ ಪ್ರಮುಖ ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದ (ಪಿಟಿಐ) ಉಪಾಧ್ಯಕ್ಷರಾಗಿ 'ದಿ ಪ್ರಿಂಟರ್ಸ್ (ಮೈಸೂರ್) ಪ್ರೈವೇಟ್ ಲಿಮಿಟೆಡ್ (ಟಿಪಿಎಂಎಲ್)' ನಿರ್ದೇಶಕ ಕೆ.ಎನ್. ಶಾಂತಕುಮಾರ್ ಅವರು ಪುನರಾಯ್ಕೆಯಾಗಿದ್ದು, 'ದಿನಮಲರ್' ಪತ್ರಿಕೆಯ ಸಂಪಾದಕ ಎಲ್.
ಆದಿಮೂಲಂ ಅವರು ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.
ಗುರುವಾರ ಪಿಟಿಐನ ಆಡಳಿತ ಮಂಡಳಿ ನಿರ್ದೇಶಕರ ವಾರ್ಷಿಕ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಎಲ್. ಆದಿಮೂಲಂ ಅವರು ಪಿಟಿಐ ಸಂಸ್ಥೆಯ ಆಡಳಿತ ಮಂಡಳಿಗೆ ಹೊಸ ಸೇರ್ಪಡೆ.
ಶಾಂತಕುಮಾರ್ ಅವರು 'ಪ್ರಜಾವಾಣಿ' ಮತ್ತು 'ಡೆಕ್ಕನ್ ಹೆರಾಲ್ಡ್' ಪತ್ರಿಕೆಗಳ ಮಾತೃಸಂಸ್ಥೆಯಾದ 'ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್'ನ ಟಿಪಿಎಂಎಲ್ ಆಡಳಿತ ಮಂಡಳಿಯಲ್ಲಿ 1983ರಿಂದ ವಿವಿಧ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಇವರು ಎಬಿಸಿಯ ಅಧ್ಯಕ್ಷರಾಗಿ, 20 ವರ್ಷಗಳಿಗೂ ಹೆಚ್ಚು ಕಾಲದಿಂದ ಐಎನ್ಎಸ್ನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮತ್ತು ಪಿಟಿಐನ ಈ ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.
16 ನಿರ್ದೇಶಕರಿರುವ ಪಿಟಿಐ ಆಡಳಿತ ಮಂಡಳಿಗೆ, 'ಆನಂದ್ ಬಜಾರ್' ಪತ್ರಿಕಾ ಸಮೂಹದ ಗೌರವ ಸಂಪಾದಕ ಮತ್ತು ಉಪಾಧ್ಯಕ್ಷ ಅವೀಕ್ ಸರ್ಕಾರ್ ಅವರು ಅಧ್ಯಕ್ಷರಾಗಿದ್ದಾರೆ. ಇವರು 2021ರಲ್ಲಿ ಆಯ್ಕೆಯಾಗಿದ್ದು, ಇವರ ಅಧಿಕಾರಾವಧಿ ಎರಡು ವರ್ಷವಿದೆ.