ನವದೆಹಲಿ: ಕಾಡುಗಳ್ಳ ವೀರಪ್ಪನ್ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪೊಲೀಸ್ ಅಧಿಕಾರಿ ಕೆ.ವಿಜಯ್ ಕುಮಾರ್ ಅವರು ಗೃಹ ಸಚಿವಾಲಯದ (ಎಂಎಚ್ಎ) ಹಿರಿಯ ಭದ್ರತಾ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
'ವೈಯಕ್ತಿಕ ಕಾರಣಗಳಿಂದಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ, ಈಗ ಚೆನ್ನೈನಲ್ಲಿ ನೆಲೆಸಿದ್ದೇನೆ' ಎಂದು ಅವರು ತಿಳಿಸಿದ್ದಾರೆ.
1975ರ ಬ್ಯಾಚ್ನ ಐಪಿಎಸ್ ಅಧಿಕಾರಿ ವಿಜಯ್, 2012 ರಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಮಹಾನಿರ್ದೇಶಕರಾಗಿ ಸೇವೆಯಿಂದ ನಿವೃತ್ತರಾದ ನಂತರ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಿಗೆ ಸಲಹೆಗಾರರಾಗಿದ್ದರು. 2019ರಲ್ಲಿ ಅವರು ಗೃಹ ಸಚಿವಾಲಯದ ಸಲಹೆಗಾರರಾಗಿ ನಿಯುಕ್ತರಾಗಿದ್ದರು. ತಮಿಳುನಾಡಿನಲ್ಲಿ ನರಹಂತಕ ವೀರಪ್ಪನ್ ನಿಗ್ರಹಕ್ಕಾಗಿ ರಚಿಸಲಾದ ವಿಶೇಷ ಕಾರ್ಯಪಡೆಯ ಮುಖ್ಯಸ್ಥರಾಗಿದ್ದ ಅವರ ಚಾಣಾಕ್ಷ ನಡೆಯಿಂದಾಗಿ 2004ರಲ್ಲಿ ವೀರಪ್ಪನ್ ಹತನಾಗಿದ್ದ. ಚೆನ್ನೈ ಪೊಲೀಸ್ ಆಯುಕ್ತ ಹಾಗೂ ಬಿಎಸ್ಎಫ್ನ ಮಹಾನಿರೀಕ್ಷಕರಾಗಿಯೂ ಅವರು ಕರ್ತವ್ಯ ನಿಭಾಯಿಸಿದ್ದರು.





