ನವದೆಹಲಿ: ಉತ್ತರಾಖಂಡ ಬದರಿನಾಥದ ಜ್ಯೋತಿಷ್ ಪೀಠದ ನೂತನ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರ ಪಟ್ಟಾಭಿಷೇಕಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ನ್ಯಾಯಮೂರ್ತಿಗಳಾದ ಬಿ. ಆರ್. ಗವಾಯಿ ಮತ್ತು ಬಿ. ವಿ. ನಾಗರತ್ನ ಅವರ ಪೀಠ ಈ ಆದೇಶ ನೀಡಿದೆ.
ಜ್ಯೋತಿಷ್ ಪೀಠದ ನೂತನ ಶಂಕರಾಚಾರ್ಯರಾಗಿ ಅವಿಮುಕ್ತೇಶ್ವರಾನಂದ ಅವರ ನೇಮಕವನ್ನು ಅನುಮೋದಿಸಲಾಗಿಲ್ಲ ಎಂದು ಪುರಿಯ ಗೋವರ್ಧನ ಮಠದ ಶಂಕರಾಚಾರ್ಯರು ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪೀಠಕ್ಕೆ ತಿಳಿಸಿದ್ದಾರೆ.
ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಜ್ಯೋತಿಷ್ ಪೀಠದ ಉತ್ತರಾಧಿಕಾರಿ ಶಂಕರಾಚಾರ್ಯರಾಗಿ ನೇಮಕಗೊಂಡಿದ್ದಾರೆ ಎಂಬ ಸುಳ್ಳು ಆರೋಪದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಈ ಪ್ರಕರಣ 2020 ರಿಂದ ನ್ಯಾಯಾಲಯದ ಮುಂದೆ ಬಾಕಿ ಇದೆ.
ಹಿಂದೂ ಧರ್ಮದ ಅದ್ವೈತ ವೇದಾಂತ ಸಂಪ್ರದಾಯದಲ್ಲಿ ಶಂಕರಾಚಾರ್ಯ ಎಂಬುದು ಮಠಗಳ ಮುಖ್ಯಸ್ಥರಿಗೆ ಸಾಮಾನ್ಯವಾಗಿ ಬಳಸುವ ಶೀರ್ಷಿಕೆಯಾಗಿದೆ.
ಆದಿ ಶಂಕರಾಚಾರ್ಯರು ಉತ್ತರದಲ್ಲಿ ಬದರಿಕಾಶ್ರಮ ಜ್ಯೋತಿಷ್ ಪೀಠ, ಪಶ್ಚಿಮದಲ್ಲಿ ದ್ವಾರಕೆಯ ಶಾರದಾ ಪೀಠ, ಪೂರ್ವದಲ್ಲಿ ಪುರಿಯ ಗೋವರ್ಧನ ಪೀಠ ಮತ್ತು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದ ಪೀಠದಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದ್ದರು.