ಕಾಸರಗೋಡು: ಪರಿಹರಿಸಲಾಗದ ಸಮಸ್ಯೆಯಾಗಿ ಮುಂದುವರಿಯುತ್ತಿರುವ ಸಮುದ್ರ ಕೊರೆತ ತಡೆಗಟ್ಟಲು ಪರಿಸರಸ್ನೇಹಿ 'ಸೀ ವೇವ್ ಬ್ರೇಕರ್' ಹೆಸರಿನ ವಿನೂತನ ಪರಿಕಲ್ಪನೆಯನ್ನು ಕಾಸರಗೋಡಿನಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ.
ಕಾಸರಗೋಡಿನ ಯುವ ಉದ್ಯಮಿ ಯು.ಕೆ ಯೂಸುಫ್ ಅವರು ಕಡಿಮೆ ವೆಚ್ಚದ ಈ ಹೊಸ ವಿಧಾನ ಪರಿಚಯಿಸಿದ್ದು, ಕಾಸರಗೋಡು ನೆಲ್ಲಿಕುಂಜೆ ಕಡಪ್ಪುರದಲ್ಲಿ ಪ್ರಾಯೋಗಿಕವಾಗಿ ಸೀವೇವ್ ಬ್ರೇಕರ್ ನಿರ್ಮಿಸಲಾಗಿದೆ. ಯೋಜನೆ ಬಗ್ಗೆ ಕರ್ನಾಟಕ ಸರ್ಕಾರವೂ ಉತ್ಸಾಹ ತೋರಿದ್ದು, ಈಗಾಗಲೆ ಬಂದರು ಮತ್ತು ಮೀನುಗಾರಿಕಾ ಖಾತೆ ಸಚಿವ ಅಂಗಾರ ಅವರು ಅಧಿಕಾರಿಗಳೊಂದಿಗೆ ಕಾಸರಗೋಡಿಗೆ ಭೇಟಿ ನೀಡಿ ಈ ಬಗ್ಗೆ ಅಧ್ಯಯನವನ್ನೂ ನಡೆಸಿದ್ದಾರೆ. ಉದ್ಯಮಿ ಯು.ಕೆ ಯೂಸುಫ್ ಅವರು ಸ್ವಂತ ಖರ್ಚಿನಲ್ಲಿ ಪ್ರಾಯೋಗಿಕವಾಗಿ ಕೈಗೊಂಡಿರುವ ಸೀ ವೇವ್ ಬ್ರೇಕರ್ ಭವಿಷ್ಯದಲ್ಲಿ ಸಮುದ್ರ ಕೊರೆತ ತಡೆಗಟ್ಟುವಲ್ಲಿ ಮಹತ್ವದ ಮೈಲಿಗಲ್ಲಾಗುವ ಸಾಧ್ಯತೆಯಿದೆ.
ಹೀಗಿರಲಿದೆ ಸೀವೇವ್ ಬ್ರೇಕರ್:
ಬೃಹತ್ ಗಾತ್ರದ ಬಂಡೆಕಲ್ಲುಗಳನ್ನು ಸಮುದ್ರ ದಡಕ್ಕೆ ತಂದು ಪೇರಿಸಿ ತಡೆಗೋಡೆ ನಿರ್ಮಿಸಿದರೂ ಸಮುದ್ರ ಕೊರೆತ ಯಶಸ್ವಿಯಾಗಿ ತಡೆಗಟ್ಟುವಲ್ಲಿ ಸರ್ಕಾರಕ್ಕೆ ಇದುವರೆಗೆ ಸಾಧ್ಯವಾಗಿಲ್ಲ. ಸೀವೇವ್ ಬ್ರೇಕರ್ ಎಂಬ ಹೊಸ ಪರಿಕಲ್ಪನೆ ಸಮುದ್ರ ಕೊರೆತವನ್ನು ತಡೆಗಟ್ಟುವ ಪ್ರಯತ್ನ ನಡೆಸಲಾಗುತ್ತಿದೆ. ಸುಮಾರು ಎಂಟು ಅಡಿ ಆಳಕ್ಕೆ ಹಾಗೂ 20 ಅಡಿ ಅಗಲದಲ್ಲಿ ಹೊಂಡ ತೆಗೆದು ತಳಭಾಗದಿಂದ ಕಾಂಕ್ರೀಟ್ ಫ್ರೇಮ್ ಜೋಡಿಸಿಕೊಂಡು ಬರಲಾಗುತ್ತದೆ. ಇದರ ಮಧ್ಯೆ ಮರಳು ತುಂಬಿ, ಮೇಲ್ಭಾಗಕ್ಕೆ ಹುಲ್ಲು ಹಾಗೂ ಇತರ ಸಸ್ಯಗಳನ್ನು ಬೆಳೆಸಲಾಗುತ್ತದೆ. ನೆಲ್ಲಿಕುಂಜೆ ಕಡಪ್ಪುರದಲ್ಲಿ ಪ್ರಾಯೋಗಿಕವಾಗಿ ಸುಮಾರು 30ಮೀ. ಉದ್ದದ ಸೀವೇವ್ ಬ್ರೇಕರನ್ನು ನಿರ್ಮಿಸಲಾಗಿದ್ದು, ಕೇರಳ ಮತ್ತು ಕರ್ನಾಟಕದ ಬಂದರು ಖಾತೆ ಸಚಿವರ ಉಪಸ್ಥಿತಿಯಲ್ಲಿ ಉದ್ಘಾಟನೆಗೆ ಸಜ್ಜುಗೊಂಡಿದೆ.
ಇಂದು ಲೋಕಾರ್ಪಣೆ:
ಕಡಿಮೆ ವೆಚ್ಚದ, ಪರಿಸರ ಸ್ನೇಹಿ ಹಾಗೂ ವಿನೂತನ ಶೈಲಿಯ ಕರಾವಳಿ ಸಂರಕ್ಷಣಾ ವಿಧಾನ'ಸೀವೇವ್ ಬ್ರೇಕರ್'ನ ಉದ್ಘಾಟನೆ ಇಂದು(ಅ. 27) ಸಂಜೆ 5ಕ್ಕೆ ಕಾಸರಗೋಡು ನೆಲ್ಲಿಕುಂಜೆ ಕಡಪ್ಪುರದಲ್ಲಿ ನಡೆಯಲಿದೆ. ಕೇರಳ ನೀರಾವರಿ, ಅಂತರ್ಜಲ ಖಾತೆ ಸಚಿವ ರೋಶಿ ಅಗಸ್ಟಿನ್ ಉದ್ಘಾಟಿಸುವರು. ಕರ್ನಾಟಕ ಬಂದರು ಮತ್ತು ಮೀನುಗಾರಿಕಾ ಖಾತೆ ಸಚಿವ ಎಸ್. ಅಂಗಾರ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕೇರಳ ಬಂದರು, ಪ್ರಚ್ಯವಸ್ತು ಖಾತೆ ಸಚಿವ ಅಹಮ್ಮದ್ ದೇವರ್ಕೋವಿಲ್ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸುವರು. ಶಾಸಕ ಎನ್.ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಶಾಸಕರಾದ ಸಿ.ಎಚ್ ಕುಞಂಬು, ಇ.ಚಂದ್ರಶೇಖರನ್, ಎ.ಕೆ.ಎಂ ಅಶ್ರಫ್, ಎಂ ರಾಜಗೋಪಾಲನ್ ಮುಂತಾದವರು ಪಾಲ್ಗೊಳ್ಳುವರು.