ಚೆನ್ನೈ: ಕೊಯಮತ್ತೂರಿನ ಉಕ್ಕಾಡಂನಲ್ಲಿರುವ ಶತಮಾನದಷ್ಟು ಹಳೆಯ ಸಂಗಮೇಶ್ವರ ದೇವಸ್ಥಾನಕ್ಕೆ ಕೊಟ್ಟಾಯ್ಮೇಡುವಿನ ಮೂರು ಮಸೀದಿಗಳ ಉಲೇಮಾಗಳು ಗುರುವಾರ ಭೇಟಿ ನೀಡಿ ಸೌಹಾರ್ದತೆಯ ಸಂದೇಶ ಸಾರಿದ್ದಾರೆ.
ಈ ದೇಗುಲದ ಬಳಿ ಅಕ್ಟೋಬರ್ 23ರಂದು ಕಾರೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು.
ಉಲೇಮಾಗಳನ್ನು ಆತ್ಮೀಯತೆಯಿಂದ ಬರಮಾಡಿಕೊಂಡ ದೇವಸ್ಥಾನದ ಆಡಳಿತ ಮಂಡಳಿಯವರು ಶಾಲು ಹೊದಿಸಿ ಸನ್ಮಾನಿಸಿದರು. ಸುಮಾರು 30 ನಿಮಿಷ ಅವರು ದೇವಸ್ಥಾನದಲ್ಲಿ ಇದ್ದರು.
'ಕೋಮು ಸೂಕ್ಷ್ಮ ಪ್ರದೇಶವಾಗಿರುವ ಕೊಯಮತ್ತೂರಿನಲ್ಲಿ ಶಾಂತಿ ಹಾಗೂ ಸೌಹಾರ್ದತೆ ನೆಲೆಗೊಳಿಸುವುದು ಈ ಭೇಟಿಯ ಉದ್ದೇಶವಾಗಿತ್ತು' ಎಂದು ಉಭಯ ಸಮುದಾಯದವರು ಹೇಳಿದ್ದಾರೆ.
ಮಸೀದಿಗೆ ಭೇಟಿ ನೀಡುವಂತೆ ಅರ್ಚಕರು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯವರಿಗೆ ಉಲೇಮಾಗಳು ಆಹ್ವಾನ ನೀಡಿದ್ದಾರೆ ಎಂದು ಹೇಳಲಾಗಿದೆ.
'ಕಾರಿನಲ್ಲಿ ಸಿಲಿಂಡರ್ ಸ್ಫೋಟಿಸಿದ್ದ ಪ್ರಕರಣ ವಿವಿಧ ಸಮುದಾಯಗಳಲ್ಲಿ ಆತಂಕ ಮೂಡುವಂತೆ ಮಾಡಿತ್ತು. ಈ ಘಟನೆಯನ್ನು ನಾವು ಖಂಡಿಸುತ್ತೇವೆ. ಇಸ್ಲಾಂ ಧರ್ಮವು ಹಿಂಸೆಯನ್ನು ಅನುಮೋದಿಸುವುದಿಲ್ಲ. ನಾವು ಶಾಂತಿ ಹಾಗೂ ಸಹೋದರತ್ವದಲ್ಲಿ ನಂಬಿಕೆ ಇಟ್ಟಿದ್ದೇವೆ' ಎಂದು ಇದಾಯತ್ಉಲ್ಲಾ ಎಂಬುವರು ಹೇಳಿದ್ದಾರೆ.