ಕಾಸರಗೋಡು: ಪಡನ್ನ ಪಂಚಾಯಿತಿಯ ತೆಕ್ಕೇಕೋಡ್ನಲ್ಲಿ ವರ್ಷಗಳಿಂದ ಧಾರ್ಮಿಕ ಚಟುವಟಿಕೆಗಳಲ್ಲಿ ನಿರತವಾಗಿರುವ ಶ್ರೀ ಮುತ್ತಪ್ಪನ್ ಮಡಪ್ಪುರವನ್ನು ಇಲ್ಲದಾಗಿಸಲು ಸಮಾಜವಿರೋಧಿ ನಾಸ್ತಿಕ ಶಕ್ತಿಗಳು ಪ್ರಯತ್ನಿಸುತ್ತಿದ್ದು, ಇದರ ವಿರುದ್ಧ ನ. 11ರಂದು ಬೆಳಿಗ್ಗೆ 10ಕ್ಕೆ ಹಿಂದೂ ಐಕ್ಯವೇದಿ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಯಲಿದೆ. ಇದರಲ್ಲಿ ಹಿಂದೂ ಸಮಾಜದ ಎಲ್ಲಾ ಸ್ತರದ ವಿವಿಧ ಸಮುದಾಯ ಸಂಘಟಕರು, ಸ್ಥಾನಿಕರು, ಸನ್ಯಾಸಿಗಳು, ಕ್ಷೇತ್ರ ಆಚಾರಕರ್ಮಿಗಳು ಮತ್ತು ಇತರರು ಭಾಗವಹಿಸಲಿದ್ದಾರೆ ಎಂದು ಹಿಂದೂ ಐಕ್ಯವೇದಿ ಜಿಲ್ಲಾಧ್ಯಕ್ಷ ಗೋವಿಂದನ್ ಮಾಸ್ತರ್ ಕೋಟೋಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸರ್ಕಾರದ ಎಲ್ಲ ಮಾನದಂಡ ಪಾಲಿಸಿಕೊಂಡು 2020ರಲ್ಲಿ ಶ್ರೀ ಮುತ್ತಪ್ಪನ್ ಮಡಪ್ಪುರಂ ನಿರ್ಮಿಸಲಾಗಿದ್ದು, ಅಂದು ಎಲ್ಲ ಸಮಾರಂಭಗಳಲ್ಲಿ ಮುಂಚೂಣಿಯಲ್ಲಿದ್ದ ವ್ಯಕ್ತಿಯೊಬ್ಬ ಕ್ಷೇತ್ರದ ಬಗ್ಗೆ ಅವಹೇಳನಕಾರಿಯಾಗಿ ವರ್ತಿಸುತ್ತಿರುವುದಲ್ಲದೆ, ರಾಜಕೀಯ ಒತ್ತಡದ ಮೂಲಕ ಮುತ್ತಪ್ಪನ್ ಮಡಪ್ಪುರವನ್ನು ಒಡೆದು ತೆಗೆಯುವ ಪ್ರಯತ್ನವನ್ನೂ ನಡೆಸುತ್ತಿದ್ದಾನೆ. ಸರ್ಕಾರ ನೀಡಿದ ಜಾಗದಲ್ಲಿ ಕ್ಷೇತ್ರ ನಿರ್ಮಿಸಲಾಗಿದೆ. ಇದರ ಹಕ್ಕುಪತ್ರಗಳೂ ಕೈವಶವಿದೆ. ಕ್ಷೇತ್ರದ ನಿರ್ಮಾಣದ ವರ್ಷಗಳ ನಂತರ ರಾಜಕೀಯ ಪ್ರಭಾವ ಬಳಸಿ, ಪರಂಬೋಕು ಜಾಗದಲ್ಲಿ ಕ್ಷೇತ್ರ ನಿರ್ಮಿಸಲಾಗಿದೆ ಎಂದು ಪ್ರಚಾರ ನಡೆಸಲಾಗುತ್ತಿದೆ. ಈ ಮಧ್ಯೆ ಮುತ್ತಪ್ಪನ್ ಮಡಪ್ಪುರದಲ್ಲಿ ನಡೆಯುತ್ತಿದ್ದ ವಿಶೇಷ ಕಾರ್ಯಕ್ರಮಗಳನ್ನು ಬುಡಮೇಲುಗೊಳಿಸಲು ಯತ್ನಿಸಿದ್ದಾನೆ. ಉತ್ಸವ ಸಂದರ್ಭ ಅರೆನಗ್ನ ದೇಹ ಪ್ರದರ್ಶನ, ಪೆಟ್ರೋಲ್ ಸುರಿದುಕೊಂಡು ಶ್ರೀಮುತ್ತಪ್ಪನ್ ನಡೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಪಕವಾಗಿ ಪ್ರಚಾರಗೊಂಡಿದೆ. ಇಂತಹ ಅವಹೇಳನಕಾರಿ ಕೃತ್ಯಗಳನ್ನು ಹಿಂದೂ ಐಕ್ಯವೇದಿ ಎಂದಿಗೂ ಸಹಿಸದು. ಕ್ಷೇತ್ರಗಳಲ್ಲಿನ ಆಚಾರ, ಅನುಷ್ಠಾನಗಳನ್ನು ನಾಶಮಾಡಲು ಯತ್ನಿಸುತ್ತಿರುವ ಕೆಲವು ನಾಸ್ತಿಕರನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನಾ ಧರಣಿ ನಡೆಯಲಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಹಿಂದೂ ಐಕ್ಯವೇದಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಪಿ.ಶಾಜಿ, ಗೋಪಾಲಕೃಷ್ಣ ತಚ್ಚಂಗಾಡ್, ಅಜಯಕುಮಾರ್ ನೀಲಿಕಾಟ್ ಭಾಗವಹಿಸಿದ್ದರು.
ಪಡನ್ನ-ಶ್ರೀ ಮುತ್ತಪ್ಪನ್ ಕ್ಷೇತ್ರದ ಅವಹೇಳನ ವಿರುದ್ಧ ನಾಳೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ
0
November 09, 2022
Tags