ಕಾಸರಗೋಡು: 'ನೀವು ಗಳಿಸಿದ್ದನ್ನು ಎಂದಿಗೂ ವ್ಯರ್ಥ ಮಾಡಬೇಡಿ, ಮೂಢನಂಬಿಕೆಯ ವಿರುದ್ಧ ವೈಜ್ಞಾನಿಕ ರಕ್ಷಣೆ' ಎಂಬ ಧ್ಯೇಯದೊಂದಿಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ವತಿಯಿಂದ ವಿದ್ಯಾನಗರ ಸನ್ರೈಸ್ ಪಾರ್ಕ್ನಲ್ಲಿ ಮಕ್ಕಳ ದಿನವನ್ನು ಆಚರಿಸಲಾಯಿತು.
ವಿದ್ಯಾರ್ಥಿ ಪಾರ್ಲಿಮೆಂಟ್ನ ಪ್ರಧಾನಮಂತ್ರಿ ಫಾತಿಮಾ ನಬಿಲಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಯುವ ಪೀಳಿಗೆಯನ್ನು ಬಲಿತೆಗೆದುಕೊಳ್ಳುತ್ತಿರುವ ಡ್ರಗ್ಸ್ ಮಾಫಿಯಾ ಇಂದು ಭಾರತ ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ. ಶಿಕ್ಷಣ ಸಂಸ್ಥೆಗಳನ್ನು ಕೇಂದ್ರವಾಗಿಸಿಕೊಂಡು ದೇಶಾದ್ಯಂತ ಸಕ್ರಿಯವಾಗಿರುವ ಮಾದಕ ದ್ರವ್ಯ ಮಾಫಿಯಾ ಯುವ ಪೀಳಿಗೆಯನ್ನು ಬಲಿತೆಗೆದುಕೊಳ್ಳುತ್ತಿದೆ. ಇದರ ವಿರುದ್ಧ ಎಲ್ಲರೂ ಒಗ್ಗಟ್ಟಾಗಬೇಕು. ಜವಾಹರಲಾಲ್ ನೆಹರು ಅವರ ಕನಸಿನಂತೆ ವಿವಿಧತೆಯಲ್ಲಿ ಏಕತೆ ತುಂಬಿರುವ ಭಾರತದ ಉತ್ತಮ ಭವಿಷ್ಯಕ್ಕಾಗಿ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ತಿಳಿಸಿದರು. ಮಕ್ಕಳ ಪಾರ್ಲಿಮೆಂಟ್ ಅಧ್ಯಕ್ಷೆ ಕೆ.ಪಿ.ಪೂಜಾಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಉಪನ್ಯಾಸಕಿ ಶಿವದಾ ಕೆ ನಾಯರ್ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭ ಶಾಸಕ ಎನ್.ಎ.ನೆಲ್ಲಿಕುನ್ನು ಮಕ್ಕಳ ದಿನಾಚರಣೆ ಸಂದೇಶ ನೀಡಿ, ಭಾರತದ ಅಭ್ಯುದಯ, ಪ್ರಗತಿಯ ಧ್ಯೇಯದಿಂದ ಆಡಳಿತ ನಡೆಸಿದ ನೆಹರು ಸರ್ವಕಾಲಕ್ಕೂ ಮಾದರಿ ಎಂದು ತಿಳಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದರು. ಮಕ್ಕಳ ದಿನಾಚರಣೆಯ ಅಂಚೆ ಚೀಟಿಯನ್ನು ಕಾಸರಗೋಡು ನಗರಸಭೆ ಅಧ್ಯಕ್ಷ ಅಡ್ವ.ವಿ.ಎಂ.ಮುನೀರ್ ಬಿಡುಗಡೆಗೊಳಿಸಿದರು. ಮಕ್ಕಳ ಕಲ್ಯಾಣ ಸಮಿತಿ ಜಿಲ್ಲಾ ಕಾರ್ಯದರ್ಶಿ ಟಿ.ಎಂ.ಎ.ಕರೀಂ ನೇತೃತ್ವ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್, ಓ.ಎಂ.ಬಾಲಕೃಷ್ಣನ್, ಕೆ.ರಮಣಿ, ವಿ.ಸೂರಜ್, ಜಯನ್ ಕಡಕಂ, ಎಂ.ವಿ.ನಾರಾಯಣನ್, ಪಿ.ಶ್ಯಾಮಲಾ ಉಪಸ್ಥಿತರಿದ್ದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ವತಿಯಿಂದ ಮಕ್ಕಳ ದಿನಾಚರಣೆ
0
November 16, 2022
Tags