ಜಬಲ್ಪುರ: 'ಪೌರ ಕಾರ್ಮಿಕರು ಅಥವಾ ಕೆಳ ವರ್ಗಕ್ಕೆ ಸೇರಿದ ಕುಟುಂಬದವರನ್ನು ನಿಮ್ಮ ಮನೆಗಳಿಗೆ ಬರಮಾಡಿಕೊಂಡು ವಾರದಲ್ಲಿ ಕನಿಷ್ಠ ಒಮ್ಮೆಯಾದರೂ ಅವರೊಂದಿಗೆ ಕುಳಿತು ಊಟ ಮಾಡಿ' ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಅವರು ಸಂಘದ ಸ್ವಯಂಸೇವಕರ ಕುಟುಂಬದವರಿಗೆ ತಿಳಿಸಿದ್ದಾರೆ.
ಜಬಲ್ಪುರ ನಗರದ ಕೇಂದ್ರ ಭಾಗದಲ್ಲಿರುವ ಮಹಾಕೌಶಲ್ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ಸ್ವಯಂ ಸೇವಕರ ಕುಟುಂಬದವರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಎಲ್ಲರೂ ಸ್ವದೇಶಿ ವಸ್ತುಗಳನ್ನು ಸಾಧ್ಯವಾದಷ್ಟು ಹೆಚ್ಚು ಬಳಕೆ ಮಾಡಬೇಕು. ಪಾಶ್ಚಿಮಾತ್ಯ ಕುಟುಂಬ ವ್ಯವಸ್ಥೆಯನ್ನು ದೂರವಿಡಬೇಕು' ಎಂದು ಹೇಳಿದರು.
'ಸ್ವಯಂಸೇವಕರು ಜಾತಿ ವ್ಯವಸ್ಥೆ ತೊಡೆದುಹಾಕುವ ದಿಸೆಯಲ್ಲಿ ಕೆಲಸ ಮಾಡಬೇಕು. ಎಲ್ಲರಿಗೂ ಒಳಿತು ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಕುಟುಂಬದ ಸದಸ್ಯರೆಲ್ಲರೂ ವಾರದಲ್ಲಿ ಕನಿಷ್ಠ ಒಮ್ಮೆಯಾದರೂ ಒಟ್ಟಿಗೆ ಕುಳಿತು ಭೋಜನ ಸವಿಯುವುದನ್ನು ರೂಢಿಸಿಕೊಳ್ಳಬೇಕು. ಅದರಿಂದ ಪರಸ್ಪರರ ನಡುವಣ ಬಾಂಧವ್ಯ ಗಟ್ಟಿಗೊಳ್ಳುತ್ತದೆ. ಎಲ್ಲರೂ ಈ ಹಿಂದೆ ಇದ್ದ ಕೂಡು ಕುಟುಂಬದ ಮೌಲ್ಯಗಳನ್ನು ಪಾಲಿಸಬೇಕು' ಎಂದೂ ಕಿವಿಮಾತು ಹೇಳಿದರು.