ಕಾಸರಗೋಡು: ನಗರದ ಶ್ರೀರಾಮಪೇಟೆಯ ಶ್ರೀ ವರದರಾಜ ವೆಂಕಟ್ರಮಣ ದೇವಸ್ಥಾನದಲ್ಲಿ ಶ್ರೀಕೋದಂಡರಾಮ ದೇವರ ಮೂಲ ಪ್ರತಿಷ್ಠೆ ನಡೆದು 250ವರ್ಷ ಸಂದ ಹಿನ್ನೆಲೆಯಲ್ಲಿ ಪ್ರತಿಷ್ಠಾ ಆಚರಣಾ ಮಹೋತ್ಸವ ಕಾಶೀ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಮಂಗಳವಾರ ನಡೆಯಿತು. ಪರಮ ಪೂಜ್ಯ ಗುರುವರ್ಯ ಶ್ರೀ ಸಂಯಮಿಂದ್ರ ತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ಶ್ರೀ ದೇವರಿಗೆ ಶತಕಲಶಾಭಿಷೇಕ , ಲಘು ವಿಷ್ಣು ಕಲಶಶಾಭಿಷೇಕ, ಕನಕಾಭಿಷೇಕ ನಡೆಯಿತು. ಈ ಸಂದರ್ಭ ಯಜ್ಞ ಮಂಟಪದಲ್ಲಿ ನಡೆದ ಸುಂದರಕಾಂಡ ಹವನದ ಮಹಾಪೂರ್ಣಾಹುತಿ ಶ್ರೀಪಾದಂಗಳವರ ಅಮೃತ ಹಸ್ತದಿಂದ ನಡೆಯಿತು.
ಈ ಸಂದರ್ಭ ಭಕ್ತಾದಿಗಳಿಗೆ ಆಶೀರ್ವಚನ ನೀಡಿದ ಶ್ರೀ ಸಂಯಮೀಂದ್ರ ತೀರ್ಥ ಪಾದಂಗಳವರು, ಶ್ರೀ ಮಧ್ವಚಾರ್ಯರ ಸ್ಮರಣೆಮಾತ್ರದಿಂದ ಮಾನವರು ಮಾಧವರಾಗಲು ಸಾಧ್ಯ. ಮಧ್ವ ಸಿದ್ಧಾಂತವೆಂಬುದು ಪ್ರಕೃತಿ ಸಿದ್ಧಾಂತವಾಗಿದ್ದು, ಮಧ್ವ ನವಮಿಯ ದಿನದಂದು ಮಧ್ವರ ಸ್ಮರಣೆ ಸಕಲ ಜೀವಸಂಕುಲದ ಉನ್ನತಿಗೆ ಕಾರಣವಾಗುವುದಾಗಿ ತಿಳಿಸಿದರು. ಮಂಗಳೂರು ಮೊಕ್ಕಾಂನಿಂದ ಕಾಸರಗೋಡಿಗೆ ಆಗಮಿಸಿದ ಶ್ರೀಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಈ ಸಂದರ್ಭ ಶ್ರೀಗಳ ಪಾದಪೂಜೆ ನಡೆಯಿತು. ದೇಗುಲದ ಅಡಳಿತ ಮೊಕ್ತೇಸರ ಜಗದೀಶ ಕಾಮತ್ ಸ್ವಾಗತಿಸಿದರು. ಕೆ. ಪುಂಡಲೀಕ ಶೆಣೈ ಕ್ಷೇತ್ರದ ಪರಿಚಯ ನೀಡಿದರು.
ಶ್ರೀರಾಮಪೇಟೆಯ ಶ್ರೀ ವರದರಾಜ ವೆಂಕಟ್ರಮಣ ದೇವಸ್ಥಾನದಲ್ಲಿ ಪ್ರತಿಷ್ಠಾ ಆಚರಣಾ ಮಹೋತ್ಸವ, ಶತಕಲಶಾಭಿಷೇಕ
0
January 31, 2023
Tags