ಉಪ್ಪಳ: ಪೈವಳಿಕೆ ಕಾಯರ್ಕಟ್ಟೆ ಶ್ರೀಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ 21ನೇ ವಾರ್ಷಿಕೋತ್ಸವದ ಅಂಗವಾಗಿ ಪೈವಳಿಕೆಯ ಬೆನಕ ಯಕ್ಷಕಲಾ ವೇದಿಕೆಯ ನೇತೃತ್ವದಲ್ಲಿ ಹಿರಿಯ ಯಕ್ಷಗಾನ ಕಲಾವಿದ, ಪ್ರಸಾಧನ ಕಲಾವಿದ ದಿ. ದೇವಕಾನ ಕೃಷ್ಣ ಭಟ್ಟರ ಸ್ಮರಣಾರ್ಥ ಯಕ್ಷಗಾನ ಬಯಲಾಟ ಶನಿವಾರ ರಾತ್ರಿ 8 ರಿಂದ ಕಾಯರ್ಕಟ್ಟೆ ಅಯ್ಯಪ್ಪ ಭಜನಾ ಮಂದಿರ ಪರಿಸರದಲ್ಲಿ ನಡೆಯಿತು.
ಶ್ರೀಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಕಾಯರ್ಕಟ್ಟೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಟಿ.ನಾರಾಯಣ ಭಟ್ ತಲೆಂಗಳ, ಕುರಿಯ ಗೋಪಾಲಕೃಷ್ಣ ಭಟ್, ರಾಧಾಕೃಷ್ಣ ಮಾಸ್ತರ್ ಪೈವಳಿಕೆ, ಗೋಪಾಲಕೃಷ್ಣ ಭಟ್ ಕಟ್ಟದಮನೆ, ರಾಜೇಶ ಭಟ್ ನಿಡುವಜೆ ಉಪಸ್ಥಿತರಿದ್ದು ಶುಭಹಾರೈಸಿದರು.
ಯಕ್ಷಗಾನ ಗುರು, ಖ್ಯಾತ ಕಲಾವಿದ ರಮೇಶ ಶೆಟ್ಟಿ ಬಾಯಾರು ಸಂಸ್ಮರಣಾ ಭಾಷಣಗೈದು, ದಿ.ದೇವಕಾನ ಕೃಷ್ಣ ಭಟ್ಟರ ಸಮಗ್ರ ಕಲಾ ಜೀವನವನ್ನು ನೆನಪಿಸಿ, ತೆಂಕುತಿಟ್ಟಿನ ಎಲ್ಲಾ ಆಯಾಮಗಳಲ್ಲೂ ಪರಿಪೂರ್ಣರಾಗಿದ್ದ ದಿ. ದೇವಕಾನರು ಹವ್ಯಾಸಿ ಹಾಗೂ ವೃತ್ತಿ ತಂಡಗಳಿಗೆ ಶಾಸ್ತ್ರೀಯ, ಉತ್ಕøಷ್ಟ ವೇಶಭೂಷಣಗಳನ್ನು ಒದಗಿಸುವ ಗಣೇಶ ಕಲಾವೃಂದವನ್ನು ಸ್ಥಾಪಿಸುವ ಮೂಲಕ ವಿಶಿಷ್ಟ ಕಾಣ್ಕೆ ನೀಡಿದವರು. ಪ್ರಸಾದನ, ನಿರ್ದೇಶನ, ಸಂಪನ್ಮೂಲ ವ್ಯಕ್ತಿಗಳಾಗಿ ನಾಡಿನೆಲ್ಲೆಡೆ ಚಿರಪರಿಚಿತರಾಗಿ ತೆಂಕುತಿಟ್ಟಿನ ಅಗ್ರ ಕಲಾವಿದರ ಪಟ್ಟಿಗೆ ಸೇರ್ಪಡೆಗೊಂಡವರಾಗಿದ್ದರು ಎಂದು ನೆನಪಿಸಿದರು. ಸದಾ ಹಸನ್ಮುಖಿಗಳಾಗಿ ಸರಳ ವ್ಯಕ್ತಿತ್ವ, ಕಲ್ಮಶರಹಿತ ಜೀವನ ನಡೆಸಿದ ದಿ.ದೇವಕಾನರ ಬದುಕು ಆದರ್ಶಪ್ರಾಯವಾದುದು ಎಂದು ತಿಳಿಸಿದರು.
ಈ ಸಂದರ್ಭ ಯಕ್ಷಗಾನ ಗುರು, ಪಡ್ರೆಚಂದು ಸ್ಮಾರಕ ಯಕ್ಷಗಾನ ತರಬೇತಿ ಕೇಂದ್ರ ಪೆರ್ಲದ ಪ್ರಾಚಾರ್ಯ ಸಬ್ಬಣಕೋಡಿ ರಾಮ ಭಟ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಶ್ರೀಕೃಷ್ಣ ದೇವಕಾನ ಅಭಿನಂದನಾ ಭಾಷಣಗೈದರು. ಜೊತೆಗೆ ಹಿಮ್ಮೇಳ ಕಲಾವಿದರಾದ ತೆಂಕಬೈಲು ಮುರಳೀಕೃಷ್ಣ ಶಾಸ್ತ್ರಿ, ಶೇಣಿ ಸುಬ್ರಹ್ಮಣ್ಯ ಭಟ್ ಹಾಗೂ ನಿಡುವಜೆ ಶಂಕರ ಭಟ್ ಅವರಿಗೆ ಗೌರವಾಭಿನಂದನೆ ಗಣ್ಯ ಸಮ್ಮುಖದಲ್ಲಿ ನಡೆಯಿತು. ಟಿ.ಗೋಪಾಲಕೃಷ್ಣ ಭಟ್ ಕಾನ ಸ್ವಾಗತಿಸಿ, ರಾಮಪ್ರಕಾಶ ಅಮ್ಮಂಕಲ್ಲು ವಂದಿಸಿದರು. ಕಿರಣ ಕುದ್ರೆಕ್ಕೋಡ್ಲು ನಿರೂಪಿಸಿದರು.
ಬಳಿಕ ಮಕ್ಕಳ ತಂಡದ ರಂಗಪ್ರವೇಶ, ವೀರ ಬಬ್ರುವಾಹನ ಹಾಗೂ ಹಿರಿಯ ಕಲಾವಿದರಿಂದ ನರಕಾಸುರಮೋಕ್ಷ ಯಕ್ಷಗಾನ ಬಯಲಾಟ ನಡೆಯಿತು.