ಕುಂಬಳೆ: ಪುತ್ತಿಗೆ ಗ್ರಾಮ ಪಂಚಾಯತಿ ಅಂಗಡಿಮೊಗರು ಸಮೀಪದ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಧನುಮಾಸದ ಒಂದು ತಿಂಗಳ ಪಯರ್ಂತ ಜರಗಿದ ಧನು ಪೂಜಾ ಮಹೋತ್ಸವದ ಮಂಗಳಾಚರಣೆ ಶನಿವಾರ ಪ್ರಾತಃಕಾಲ ಜರಗಿತು.
ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರ ಮಾರ್ಗದರ್ಶನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಅಸಂಖ್ಯಾತ ಭಕ್ತಾಧಿಗಳು ಭಾಗಿಗಳಾಗಿ ಕೃತಾರ್ಥರಾದರು. ವಿಶ್ವಕರ್ಮ ಭಜನಾ ಸಂಘ ಮುಡೂರು ಅವರಿಂದ ಭಜನೆ ಜರಗಿತು. ವಿಶೇಷ ಸಿಡಿಮದ್ದು ಹಾಗೂ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕ್ಷೇತ್ರ ಅನುವಂಶಿಕ ಮೋಕ್ತೆಸರ ನ್ಯಾಯವಾದಿ ಸುಬ್ಬಯ್ಯ ರೈ ಅಧ್ಯಕ್ಷತೆವಹಿಸಿದ್ದರು. ಸಾಮಾಜಿಕ ಧಾರ್ಮಿಕ ಮುಂದಾಳು ಪ್ರೊ. ಎ. ಶ್ರೀನಾಥ್ ಕಾಸರಗೋಡು, ಕಂಬಾರು ಶ್ರೀದುರ್ಗಾಪರಮೇಶ್ವರೀ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಪ್ರದೀಪ್ ರಾವ್, ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಸುಬ್ಬಣ್ಣ ಆಳ್ವ, ಮಲಬಾರ್ ದೇವಸ್ವಂ ಬೋರ್ಡ್ ಸದಸ್ಯ ಶಂಕರ ರೈ ಮಾಸ್ತರ್ ಸಭೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಧನು ಪೂಜಾ ಮಹೋತ್ಸವದ ಯಶಸ್ವಿಗಾಗಿ ಶ್ರಮಿಸಿದವರನ್ನು ಅಭಿನಂದಿಸಲಾಯಿತು. ಸೇವಾ ಸಮಿತಿ ಅಧ್ಯಕ್ಷ ಡಿ.ದಾಮೋದರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಿ.ಎನ್.ರಾಧಾಕೃಷ್ಣ ವಂದಿಸಿದರು. ಡಿ. ರಾಜೇಂದ್ರ ರೈ ನಿರೂಪಿಸಿದರು.