ಲಕ್ನೋ: ಮನೋರಂಜನೆ ಹೆಸರಿನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಚಲಚಿತ್ರಗಳು ಹಾಗೂ ಓಟಿಟಿ ವೆಬ್ ಸೀರಿಸ್ಗಳನ್ನು (OTT web series) ವಿಮರ್ಶಿಸುವ ಸಲುವಾಗಿ ಇಲ್ಲಿನ ಜ್ಯೋತಿಷ್ಪೀಠ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರು 'ಧರ್ಮ ಸೆನ್ಸಾರ್ ಮಂಡಳಿ' (Dharma Censor Board) ಸ್ಥಾಪಿಸಿದ್ದಾರೆ.
ಈ ಮಂಡಳಿಯ ಸಂವಿಧಾನವನ್ನು ಪ್ರಯಾಗ್ರಾಜ್ನಲ್ಲಿ ಕಳೆದ ವಾರ ಪ್ರಕಟಿಸಲಾಗಿದ್ದು, ರವಿವಾರ ಈ ಮಂಡಳಿಯನ್ನು ಹರಿದ್ವಾರದಲ್ಲಿ ಸ್ಥಾಪಿಸಲಾಗಿದೆ.
ಧರ್ಮ ಸೆನ್ಸಾರ್ ಮಂಡಳಿಯ ಕೇಂದ್ರ ಕಚೇರಿಯನ್ನು ಧರ್ಮ ಶೋಧನಾ ಸವಾಲಯ ಎಂದು ಕರೆಯಲಾಗುತ್ತದೆ. ಜನವರಿ 15ರಂದು ಇದನ್ನು ದಿಲ್ಲಿಯಲ್ಲಿ ಉದ್ಘಾಟಿಸಲಾಗುವುದು ಎಂದು ಅವರು ಹೇಳಿದ್ದಾರೆ. ಜನವರಿ 19ರಂದು ಪ್ರಯಾಗ್ರಾಜ್ನ ಮಾಘ ಮೇಳದಲ್ಲಿ ಇದರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಶಾರೂಕ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರದ 'ಬೇಷರಂ ರಂಗ್' ಹಾಡಿನ ಬಗ್ಗೆ ವಿವಾದ ಎದ್ದಿರುವ ಬೆನ್ನಲ್ಲೇ ಈ ಮಂಡಳಿ ಅಸ್ತಿತ್ವಕ್ಕೆ ಬಂದಿದೆ.
'ಪಠಾಣ್' ಚಿತ್ರ ಜನವರಿ 25ರಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಕೇಸರಿ ದಿರಿಸಿನಲ್ಲಿ ಕಾಣಿಸಿಕೊಂಡಿದ್ದು ಬಲಪಂಥೀಯರ ಆಕ್ಷೇಪಕ್ಕೆ ಕಾರಣವಾಗಿತ್ತು. ಥಿಯೇಟರ್ ಗಳಲ್ಲಿ ಈ ಚಿತ್ರವನ್ನು ಪ್ರದರ್ಶಿಸದಂತೆ ತಡೆಯಲಾಗುವುದು ಎಂದು ಬಲಪಂಥೀಯ ಸಂಘಟನೆಗಳು ಎಚ್ಚರಿಕೆ ನೀಡಿವೆ.
10 ಮಂದಿ ಇರುವ ಧರ್ಮ ಸೆನ್ಸಾರ್ ಬೋರ್ಡ್ ವಿವಿಧ ರಾಜ್ಯಗಳಲ್ಲಿ ಕಚೇರಿಯನ್ನು ಹೊಂದಲಿದೆ ಎಂದು ಮೂಲಗಳು ಹೇಳಿವೆ. ಈ ಮಂಡಳಿ ಚಲನಚಿತ್ರಗಳು, ವೆಬ್ ಸೀರೀಸ್ಗಳು, ಟಿವಿ ಧಾರಾವಾಹಿ ಮತ್ತು ಶಾಲಾ ಪಠ್ಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಿದೆ ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಹೇಳಿದ್ದಾರೆ.