ಮುಳ್ಳೇರಿಯ: ಬೆಳ್ಳೂರು ಶ್ರೀಮಹಾವಿಷ್ಣು ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ಶನಿವಾರದಿಂದ ಮೊದಲ್ಗೊಂಡು ಸೋಮವಾರದ ವರೆಗೆ ಕುಂಟಾರು ವಾಸುದೇವ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆದು ಸಂಪನ್ನಗೊಂಡಿತು.
ಶನಿವಾರ ಸಂಜೆ ಹೊರೆಕಾಣಿಕೆ ಮೆರವಣಿಗೆ ಆಗಮನ, ಉಗ್ರಾಣ ಮುಹೂರ್ತ, ಭಜನೆ, ಪ್ರಾರ್ಥನೆ, ವೈದಿಕ ವಿಧಿಗಳು, ಅತ್ತಾಳ ನಡೆಯಿತು. ಭಾನುವಾರ ಬೆಳಿಗ್ಗೆ 7ಕ್ಕೆ ಗಣಪತಿಹೋಮ, ನವಕ, 9 ರಿಂದ ಭಜನೆ, 10 ರಿಂದ ಸುಳ್ಯಪದವಿನ ಗೀತಾಜ್ಞಾನ ಯಜ್ಞ ಸಮಿತಿಯವರಿಂದ ಭಗವದ್ಗೀತಾ ಪಾರಾಯಣ, 11 ರಿಂದ ತುಲಾಭಾರ ಸೇವೆ, ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು. ಅಪರಾಹ್ನ 2 ರಿಂದ ಯಕ್ಷಗಾನ ತಾಳಮದ್ದಳೆ ನಡೆಯಿತು. ಸಂಜೆ 6 ರಿಂದ ಭಜನೆ, ರಾತ್ರಿ 8 ರಿಂದ ಭೂತಬಲಿ ಉತ್ಸವ, ಅನ್ನದಾನ ನಡೆಯಿತು.
ಸೋಮವಾರ ಬೆಳಿಗ್ಗೆ 8 ರಿಂದ ಭಜನಾರ್ಚನೆ, 9 ರಿಂದ ಶ್ರೀದೇವರ ದರ್ಶನಬಲಿ ಉತ್ಸವ, ಬಟ್ಟಲು ಕಾಣಿಕೆ, ಮಹಾಪ್ರಸಾದ, ಮಂತ್ರಾಕ್ಷತೆ ವಿತರಣೆ, ಮಧ್ಯಾಹ್ನ ಮಹಾಪೂಜೆ, ಅನ್ನದಾನ ನಡೆಯಿತು. ಅಪರಾಹ್ನ 2 ರಿಂದ ಪುರಾಣ ವಾಚನ, ಸಂಜೆ 6 ಕ್ಕೆ ಭಜನೆ, ರಾತ್ರಿ 8ಕ್ಕೆ ರಂಗಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಿತು. ರಾತ್ರಿ 9 ರಿಂದ ಲಲಿತ ಕಲಾವಿದೆರ್ ಕುಡ್ಲ ತಂಡದವರಿಂದ ಗರುಡ ಪಂಚೆಮಿ ತುಳು ನಾಟಕ ಪ್ರದರ್ಶನ ನಡೆಯಿತು.