HEALTH TIPS

'2004 ರಿಂದ 2014 ಹಗರಣಗಳ ದಶಕ': ಸಂಸತ್ತಿನಲ್ಲಿ ಕಾಂಗ್ರೆಸ್‌ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

 


          ನವದೆಹಲಿ: ಬಜೆಟ್​ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಮಾಡಿದ್ದ ಭಾಷಣದ ಮೇಲಿನ ವಂದನಾ ನಿರ್ಣಯದಲ್ಲಿ ಪಾಲ್ಗೊಂಡು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿವರವಾಗಿ ಮಾತನಾಡಿದರು.

                    ಈ ಸಂದರ್ಭದಲ್ಲಿ ಅವರು ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸುತ್ತಾ ಕಾಂಗ್ರೆಸ್​ ವಿರುದ್ಧ ಟೀಕಾಪ್ರಹಾರ ನಡೆಸಿದರು. ಯುಪಿಎ ಸರ್ಕಾರದ ಅವಧಿಯ ಆಡಳಿತವನ್ನು ಪ್ರಸ್ತಾಪಿಸಿ, "ಆ 10 ವರ್ಷಗಳಲ್ಲಿ ದೇಶದಲ್ಲಿ ಕೇವಲ ಹತ್ಯೆಗಳು, ಭಯೋತ್ಪಾದನೆ ಹಾಗು ಹಗರಣಗಳೇ ತುಂಬಿದ್ದವು. ಜಾಗತಿಕ ವೇದಿಕೆಯಲ್ಲಿ ಭಾರತದ ಧ್ವನಿ ದುರ್ಬಲವಾಗಿತ್ತು. 2014ರ ಮೊದಲು ದೇಶದ ಆರ್ಥಿಕತೆ ಹದಗೆಟ್ಟಿತ್ತು. 2004ರಿಂದ 2014ರವರೆಗೆ ಹತ್ತು ವರ್ಷಗಳ ಹಗರಣಗಳು ಮತ್ತು ಆರ್ಥಿಕ ದುರುಪಯೋಗದ ಕಾಲವೇ ಆಗಿ ಹೋಗಿತ್ತು" ಎಂದರು.

                'ದೊಡ್ಡ ನಾಯಕನಿಂದ ಅವಮಾನ': "ರಾಷ್ಟ್ರಪತಿಗಳ ದೂರದೃಷ್ಟಿಯ ಭಾಷಣ ದೇಶದ ಅದೆಷ್ಟೋ ಜನರಿಗೆ ಒಳ್ಳೆಯ ಮಾರ್ಗ ತೋರಿಸಿದೆ. ಸಂಸತ್ತಿನಲ್ಲಿ ಅವರ ಉಪಸ್ಥಿತಿ ಐತಿಹಾಸಿಕ ಮತ್ತು ದೇಶದ ಮಹಿಳೆಯರು, ಯುವತಿಯರಿಗೆ ಸ್ಫೂರ್ತಿ. ಅವರು ಭಾಷಣ ಮಾಡುತ್ತಿದ್ದಾಗ 'ಒಬ್ಬ ದೊಡ್ಡ ನಾಯಕ' ಅವರನ್ನು ಅವಮಾನಿಸಿದರು. ಆ ಸಂದರ್ಭದಲ್ಲಿ ಸಮಾಜದ ಹಿಂದುಳಿದ ವರ್ಗದ ಬಗ್ಗೆ ಆ ನಾಯಕನ ಉದ್ದೇಶ ಸ್ಪಷ್ಟವಾಗಿ ಗೋಚರಿಸಿತು. ರಾಷ್ಟ್ರಪತಿಗಳ ಭಾಷಣದ ಬಗ್ಗೆ ಯಾರೂ ಮಾತನಾಡಲಿಲ್ಲ" ಎಂದು ಪ್ರಧಾನಿ ವಿಪಕ್ಷಗಳನ್ನು ಟೀಕಿಸಿದರು.

              ಜಗತ್ತಿಗೆ ಭಾರತದಿಂದ ಪರಿಹಾರ: "ಭಾರತ ಈ ಹಿಂದೆ ಇತರರ ಮೇಲೆ ಅವಲಂಬಿತವಾಗಿತ್ತು. ಈಗ ಜಾಗತಿಕ ಸಮಸ್ಯೆಗಳನ್ನು ಪರಿಹರಿಸುತ್ತಿದೆ ಎಂದು ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಹೇಳಿದ್ದರು. ಆದರೆ, ಈ ಬಗ್ಗೆ ಯಾರೂ ಮಾತನಾಡಲೇ ಇಲ್ಲ. ಇದರ ವಿರುದ್ಧ ಮಾತನಾಡುವವರು ಯಾರಾದರೂ ಇರುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ, ಅದರ ಬಗ್ಗೆಯೂ ಯಾರೂ ಮಾತನಾಡಲಿಲ್ಲ" ಎಂದು ಮೋದಿ ಹೇಳಿದರು.

               ಹಲವು ದೇಶಗಳಲ್ಲಿ ಅಸ್ಥಿರತೆ: "ಜಗತ್ತಿನಲ್ಲಿ ಸಾಂಕ್ರಾಮಿಕ ರೋಗ ಹರಡಿತ್ತು. ಮತ್ತೊಂದೆಡೆ, ಯುದ್ಧ ನಡೆಯುತ್ತಿತ್ತು. ಜಗತ್ತು ವಿಭಜನೆಯಾಗಿತ್ತು. ಇಂತಹ ಸ್ಥಿತಿಯಲ್ಲಿ ದೇಶವನ್ನು ನಿಭಾಯಿಸಿದ ರೀತಿ ಮತ್ತು ದೇಶ ನೆಲನಿಂತಿರುವ ರೀತಿಯೇ ಅದ್ಭುತವಾಗಿದೆ. ನಮ್ಮ ಮುಂದೆ ಸವಾಲುಗಳಿವೆ. ಆದರೆ, ಇವುಗಳು 140 ಕೋಟಿ ಜನರ ಶಕ್ತಿಗಿಂತ ಬಲವಾಗಿಲ್ಲ. ಇಂದಿಗೂ ಹಲವು ದೇಶಗಳಲ್ಲಿ ಅಸ್ಥಿರತೆ ಇದೆ. ನಮ್ಮ ನೆರೆ ದೇಶಗಳೂ ಸಮಸ್ಯೆಗಳಿಂದ ಬಳಲುತ್ತಿವೆ. ಇಂತಹ ವಾತಾವರಣದಲ್ಲೂ ನಮ್ಮ ದೇಶವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ" ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

                ಇದು ಸುಧಾರಣೆಯ ಸರ್ಕಾರ: "ಕೋವಿಡ್ ಸಮಯದಲ್ಲಿ ನಾವು ನಮ್ಮಲ್ಲಿಯೇ ಲಸಿಕೆ ತಯಾರಿಸಿ, ಜನರಿಗೆ ಉಚಿತವಾಗಿ ನೀಡಿದ್ದೇವೆ. ಅಷ್ಟೇ ಅಲ್ಲ, ಪ್ರಪಂಚದ ಸುಮಾರು 150 ದೇಶಗಳಿಗೆ ಲಸಿಕೆ ಮತ್ತು ಔಷಧಗಳನ್ನು ನೀಡಿದ್ದೇವೆ. ಈಗ ನಾವು ಸ್ಥಿರ ಮತ್ತು ನಿರ್ಣಾಯಕ ಸರ್ಕಾರವನ್ನು ಹೊಂದಿದ್ದೇವೆ. ಇದು ಸುಧಾರಣೆಯ ಸರ್ಕಾರವಾಗಿದೆ. ಈ ಸರ್ಕಾರ ಸಕಾರಾತ್ಮಕತೆ ಮತ್ತು ಭರವಸೆ ಕೇಂದ್ರಿತವಾಗಿದೆ" ಎಂದು ವಿವರಿಸಿದರು.


                ಜಿ20 ಸಾರಥ್ಯದ ಹೆಮ್ಮೆ: "ನಮಗೆ ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸುವ ಅವಕಾಶ ಸಿಕ್ಕಿದೆ. ಆದರೆ, ಇದು ಕೆಲವರಿಗೆ ನೋವುಂಟು ಮಾಡಿದೆ ಎಂದು ಈಗ ನನಗನಿಸುತ್ತಿದೆ. ಪ್ರತಿ ವಿಶ್ವಾಸಾರ್ಹ ಕಂಪನಿ ಕೂಡ ಭಾರತದ ಬಗ್ಗೆ ಹೊಸ ನಂಬಿಕೆ ಮತ್ತು ಭರವಸೆ ಹೊಂದಿದೆ. ಇತರ ದೇಶಗಳು ನಮ್ಮನ್ನು ಭರವಸೆಯಿಂದ ನೋಡಲು ಭಾರತದ ಸ್ಥಿರತೆ, ಶಕ್ತಿ ಮತ್ತು ಬೆಳವಣಿಗೆಯೇ ಕಾರಣ ಎಂದು ಪ್ರಧಾನಿ ತಿಳಿಸಿದರು.

              ಉತ್ಪಾದನಾ ಕೇಂದ್ರ ಭಾರತ: "ಇಂದು ಡಿಜಿಟಲ್ ಮೂಲಸೌಕರ್ಯದೊಂದಿಗೆ ನಾವು ಆಧುನಿಕ ಯುಗದತ್ತ ಸಾಗುತ್ತಿದ್ದೇವೆ. ಸೆಕೆಂಡ್‌ಗಳಲ್ಲೇ ಸಾವಿರಾರು ಕೋಟಿ ಹಣವನ್ನು ಜನರಿಗೆ ವರ್ಗಾಯಿಸುವ ಏಕೈಕ ದೇಶ ನಮ್ಮದು. ಹೊಸ ಮೌಲ್ಯ ಮತ್ತು ಪೂರೈಕೆ ಸರಪಳಿಯೊಂದಿಗೆ ನಾವು ಜಗತ್ತನ್ನು ಅಚ್ಚರಿಗೊಳಿಸಿದ್ದೇವೆ. ಭಾರತವು ಜಾಗತಿಕ ಉತ್ಪಾದನಾ ಕೇಂದ್ರವಾಗಿದೆ. ಈಗ ನಾವು 6 ಸಾವಿರದಿಂದ 7 ಸಾವಿರ ಕೋಟಿ ಮೌಲ್ಯದ 108 ನವೋದ್ಯಮಗಳನ್ನು ಹೊಂದಿದ್ದೇವೆ. ಮೊಬೈಲ್ ಉತ್ಪಾದನೆಯಲ್ಲಿ ಭಾರತವು ಎರಡನೇ ಸ್ಥಾನದಲ್ಲಿದ್ದರೆ, ದೇಶೀಯ ವಿಮಾನಯಾನದಲ್ಲಿ ಮೂರನೇ ಸ್ಥಾನದಲ್ಲಿದೆ" ಎಂದು ಮೋದಿ ಹೇಳಿದರು.

                   ಕೆಲವರು ಖಿನ್ನತೆಯಲ್ಲಿದ್ದಾರೆ: "ನಮ್ಮಲ್ಲಿ ಖಿನ್ನತೆಯಲ್ಲಿ ಮುಳುಗಿರುವ ಕೆಲವು ಜನರಿದ್ದಾರೆ. ಈ ಪ್ರಗತಿಯನ್ನು ಅವರಿಗೆ ನೋಡಲಾಗುತ್ತಿಲ್ಲ. ಈ ದೇಶದ ಕೀರ್ತಿಯನ್ನೂ ಅವರು ನೋಡಲಾರರು. ಈಗ ನಿರುದ್ಯೋಗದ ಬಗ್ಗೆ ಮಾತನಾಡುತ್ತಿರುವವರು ಅತೃಪ್ತರಾಗಿದ್ದಾರೆ. ಅಂದು ನಾಗರಿಕ ಪರಮಾಣು ಶಕ್ತಿಯ ಬಗ್ಗೆ ಚರ್ಚೆ ನಡೆದಾಗ ಅವರು, ಮತಕ್ಕಾಗಿ ನಗದು ಹಗರಣದಲ್ಲಿ ಭಾಗಿಯಾಗಿದ್ದರು. ಸಿಡಬ್ಲ್ಯೂಜಿ, ಕಲ್ಲಿದ್ದಲು ಹಗರಣಗಳಲ್ಲಿ ತೊಡಗಿದ್ದರು" ಎಂದು ಕಾಂಗ್ರೆಸ್​ ವಿರುದ್ಧ ಟೀಕಿಸಿದರು.

                  ಜನರೇ ನನ್ನ ರಕ್ಷಾ ಕವಚ: "ಕೋಟ್ಯಂತರ ಜನರೇ ನನ್ನ ರಕ್ಷಾ ಕವಚ. ಪ್ರತಿಪಕ್ಷಗಳ ನಿಂದನೆಗಳು ಮತ್ತು ಆರೋಪಗಳು ಯಾವುದೇ ಪರಿಣಾಮ ಬೀರುವುದಿಲ್ಲ. ನನ್ನ ಮೇಲೆ ಜನತೆಗೆ ನಂಬಿಕೆ ಇದೆ. ಪತ್ರಿಕೆಗಳ ತಲೆಬರಹ ಮತ್ತು ಟಿವಿ ದೃಶ್ಯಗಳನ್ನು ನೋಡಿ ಅಲ್ಲ. ಜನರ ಸೇವೆಯಲ್ಲಿ ನನ್ನ ಸಮರ್ಪಣೆಯನ್ನು ಜನತೆ ಗಮನಿಸಿದ್ದಾರೆ" ಎಂದರು.

                      ಕೇಂದ್ರದ ಸಾಧನೆಗಳ ಉಲ್ಲೇಖ: "ಈ ಹಿಂದೆ ಮಧ್ಯಮ ವರ್ಗವನ್ನು ಕಡೆಗಣಿಸಲಾಗಿತ್ತು. ಆದರೆ, ಮಧ್ಯಮ ವರ್ಗದ ಪ್ರಾಮಾಣಿಕತೆಯನ್ನು ನಮ್ಮ ಎನ್‌ಡಿಎ ಸರ್ಕಾರ ಗುರುತಿಸಿದೆ. ಅವರೇ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ. ಆಗ ಗಣಿಗಾರಿಕೆಯಿಂದ ರಕ್ಷಣಾ ವಲಯವರೆಗೂ ಮಹಿಳೆಯರು ತಮ್ಮ ಹಕ್ಕು ಸಾಧಿಸುತ್ತಿದ್ದಾರೆ. 9 ಕೋಟಿ ಜನರು ಗ್ಯಾಸ್ ಸಂಪರ್ಕ ಪಡೆದಿದ್ದಾರೆ. 11 ಕೋಟಿ ಮಹಿಳೆಯರಿಗೆ ಉಚಿತ ಮನೆ ದೊರೆತಿದೆ. 8 ಕೋಟಿ ಜನ ತಮ್ಮ ಮನೆಯಲ್ಲೇ ನಳದ ನೀರು ಪಡೆಯುತ್ತಿದ್ದಾರೆ. ಪ್ರತಿಪಕ್ಷಗಳ ಸುಳ್ಳುಗಳನ್ನು ಈ ಜನತೆ ಹೇಗೆ ಒಪ್ಪಿಕೊಳ್ಳುತ್ತಾರೆ?" ಎಂದು ಕಿಡಿಕಾರಿದರು.

Speaking in the Lok Sabha.

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries