ನವದೆಹಲಿ: ಭಾರತದಲ್ಲಿ ದೇಶ ವ್ಯಾಪಿ ಕೋವಿಡ್ ಲಸಿಕೆ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ 34 ಲಕ್ಷಕ್ಕೂ ಅಧಿಕ ಜನರ ಪ್ರಾಣವನ್ನು ಉಳಿಸಲಾಗಿದೆ ಎಂದು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ ಪ್ರಕಟಿಸುವ ವರದಿಯಲ್ಲಿ ಹೇಳಲಾಗಿದೆ.
ಅಲ್ಲದೇ, ದೇಶದ ಆರ್ಥಿಕ ಕ್ಷೇತ್ರದಲ್ಲಿನ ನಷ್ಟವನ್ನು ತಡೆಯಲು ಸಹ ಈ ಲಸಿಕೆ ಕಾರ್ಯಕ್ರಮ ನೆರವಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಇನ್ಸ್ಟಿಟ್ಯೂಟ್ ಫಾರ್ ಕಾಂಪಿಟೇಟಿವ್ನೆಸ್ ಮತ್ತು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ ಈ ಕುರಿತು ಅಧ್ಯಯನ ಕೈಗೊಂಡಿದ್ದವು.
ಇನ್ಸ್ಟಿಟ್ಯೂಟ್ ಫಾರ್ ಕಾಂಪಿಟೇಟಿವ್ನೆಸ್ ಮತ್ತು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಯುಎಸ್-ಏಷ್ಯಾ ಟೆಕ್ನಾಲಜಿ ಮ್ಯಾನೇಜ್ಮೆಂಟ್ ಸೆಂಟರ್ ಜಂಟಿಯಾಗಿ ವರ್ಚುವಲ್ ವಿಧಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಅವರು ಈ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿದರು.
'2020ರ ಜನವರಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್-19 ಅನ್ನು ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಎಂಬುದಾಗಿ ಘೋಷಿಸಿತು. ಆದರೆ, ಈ ಘೋಷಣೆಗೂ ಮುನ್ನವೇ ಭಾರತದಲ್ಲಿ ಈ ಸೋಂಕು ಕಾಯಿಲೆಯ ನಿರ್ವಹಣೆಗೆ ಸಂಬಂಧಿಸಿ ವಿವಿಧ ಆಯಾಮಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಿದ್ಧತೆಗಳು ನಡೆಯುತ್ತಿದವು' ಎಂದು ಸಚಿವ ಮಾಂಡವೀಯಾ ಹೇಳಿದರು.
ದೇಶದಲ್ಲಿ ಕೊರೊನಾ ಸೋಂಕು ಪ್ರಸರಣ ತಡೆಯುವಲ್ಲಿ ಕಂಟೇನ್ಮೆಂಟ್ ವಲಯಗಳ ರಚನೆಯು ವಹಿಸಿದ್ದ ಮಹತ್ವದ ಪಾತ್ರ ಕುರಿತು ಅಧ್ಯಯನ ವರದಿಯಲ್ಲಿ ಚರ್ಚಿಸಲಾಗಿದೆ.
ಸೋಂಕಿತರ ಸಂಪರ್ಕಕ್ಕೆ ಬಂದವರ ಪತ್ತೆ, ಸಾಮೂಹಿಕ ಪರೀಕ್ಷೆ, ಹೋಂ ಕ್ವಾರಂಟೈನ್, ಆರೋಗ್ಯಕ್ಷೇತ್ರ ಮೂಲಸೌಕರ್ಯಗಳನ್ನು ಹೆಚ್ಚಿಸುವುದು, ಜಿಲ್ಲೆ, ರಾಜ್ಯದಿಂದ ಹಿಡಿದು ಕೇಂದ್ರದವರೆಗೆ ಸಂಬಂಧಪಟ್ಟ ಇಲಾಖೆಗಳ ನಡುವಿನ ಸಮನ್ವಯದ ಫಲವಾಗಿ ಸೋಂಕು ಪ್ರಕರಣಕ್ಕೆ ಪರಿಣಾಮಕಾರಿಯಾಗಿ ಕಡಿವಾಣ ಹಾಕಲು ಸಾಧ್ಯವಾಯಿತು ಎಂಬ ಅಂಶದ ಬಗ್ಗೆ ವರದಿಯಲ್ಲಿ ಒತ್ತು ನೀಡಲಾಗಿದೆ.