ಮುನ್ನಾರ್,: ಕೇರಳದ ಕರಾವಳಿ ಮತ್ತು ಒಳನಾಡು ಪ್ರದೇಶಗಳಲ್ಲಿ ತಾಪಮಾನ ಏರಿಕೆಯಾಗುತ್ತಿದ್ದರೂ ಮುನ್ನಾರ್(Munnar) ಗಿರಿಧಾಮದಲ್ಲಿ ಶೂನ್ಯಕ್ಕೂ ಕಡಿಮೆ ಮಟ್ಟಕ್ಕೆ ಕುಸಿದಿರುವುದರಿಂದ ಈ ಪ್ರವಾಸಿ ಸ್ಥಳವು ಚಳಿಯಿಂದ ತತ್ತರಿಸುತ್ತಿದೆ.
ತಂಪು ಹವಾಮಾನವು ಪ್ರವಾಸಿಗಳನ್ನು ಆಕರ್ಷಿಸುತ್ತಿದೆಯಾದರೂ, ದಟ್ಟವಾದ ಮಂಜಿನಿಂದಾಗಿ 550 ಹೆಕ್ಟೇರ್ ಪ್ರದೇಶದಲ್ಲಿನ ಚಹಾಗಿಡಗಳ ಎಲೆಗಳು ಮುರುಟಿರುವುದರಿಂದ ಕಣ್ಣನ್ ದೇವನ್ ಹಿಲ್ ಪ್ಲಾಂಟೇಷನ್ಸ್(Kanan Devan Hills Plantations) ಗೆ ಭಾರಿ ನಷ್ಟವುಂಟಾಗಿದೆ. 2014ರಲ್ಲಿ ಭಾರೀ ಮಂಜಿನಿಂದಾಗಿ 800 ಹೆಕ್ಟೇರ್ ಪ್ರದೇಶದಲ್ಲಿನ ಚಹಾ ಗಿಡಗಳು ನಾಶಗೊಂಡ ನಂತರ ಇದು ಅತ್ಯಂತ ದೊಡ್ಡ ನಷ್ಟವಾಗಿದೆ ಎಂದು ಕಂಪನಿಯು ತಿಳಿಸಿದೆ.
ಜ.11ರಿಂದ 21ರವರೆಗೆ ತಾಪಮಾನವು ಶೂನ್ಯಕ್ಕಿಂತ ಕಡಿಮೆ ಮಟ್ಟದಲ್ಲಿಯೇ ಇತ್ತು ಮತ್ತು ಇದರಿಂದಾಗಿ ಮಂಜು ಬೀಳತೊಡಗಿದ್ದು, ಚಹಾ ಗಿಡಗಳಿಗೆ ಹಾನಿಯನ್ನುಂಟು ಮಾಡಿತ್ತು. ಬಳಿಕ ತಾಪಮಾನದಲ್ಲಿ ಏರಿಕೆಯಾಗಿದ್ದು, ಕಳೆದ ವಾರದವರೆಗೂ ಐದರಿಂದ ಏಳು ಡಿಗ್ರಿ ಸೆಲ್ಶಿಯಸ್ ನಡುವೆ ಇತ್ತು. ಗುರುವಾರ ಮತ್ತು ಶನಿವಾರ ತಾಪಮಾನ ಇಳಿಯತೊಡಗಿದ್ದು,ಎರಡು ಕೇಂದ್ರಗಳಲ್ಲಿ ಶೂನ್ಯಕ್ಕಿಂತ ಕಡಿಮೆ ತಾಪಮಾನ ದಾಖಲಾಗಿದೆ.
'ಆದರೆ ಇಲ್ಲಿ ಹಗಲಿನ ಸಮಯ ತುಂಬ ತಾಪಮಾನವಿರುತ್ತದೆ ಮತ್ತು ಮಧ್ಯಾಹ್ನದ ವೇಳೆಗೆ 28 ಡಿ.ಸೆ.ಗೆ ಏರುತ್ತದೆ. ನಾವಿನ್ನೂ ನಷ್ಟವನ್ನು ಲೆಕ್ಕ ಹಾಕಬೇಕಿದೆ,ಆದರೆ ಗಿಡಗಳು ಪುನರುತ್ಥಾನಗೊಳ್ಳಲು ಕನಿಷ್ಠ ನಾಲ್ಕು ತಿಂಗಳುಗಳು ಬೇಕು. ಮುಂದಿನ ಕೆಲವು ತಿಂಗಳುಗಳಲ್ಲಿ ಚಹಾ ಉತ್ಪಾದನೆ ತೀವ್ರ ಕುಸಿಯಲಿದೆ 'ಎಂದು ಕಂಪನಿಯ ಅಧಿಕಾರಿಯೋರ್ವರು ತಿಳಿಸಿದರು.