ನವದೆಹಲಿ: ಸ್ವಾಂತತ್ರ್ಯದ 75ನೇ ವರ್ಷದ ಸಂದರ್ಭದಲ್ಲಿ ಪ್ರಬಲ ಆರ್ಥಿಕ ಶಕ್ತಿಯಾಗಿ ಭಾರತವನ್ನು ಜಗತ್ತು ಗುರುತಿಸಿದೆ. ಭಾರತದ ಯಶಸ್ಸನ್ನು ಜಗತ್ತು ಹೊಗಳುತ್ತಿದೆ. ರೈತರು, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳಿಗೆ ಪೂರಕವಾದ ಬಜೆಟ್ ಇದಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.
ಬಜೆಟ್ ಮಂಡನೆ ಆರಂಭಿಸಿದ ನಿರ್ಮಲಾ ಸೀತಾರಾಮನ್ ಅವರು ಆರಂಭಿಕ ನುಡಿಗಳನ್ನಾಡಿದರು. ಕೋವಿಡ್ 19 ಬಿಕ್ಕಟ್ಟಿನ ಸಮಯದಲ್ಲಿ 80 ಕೋಟಿ ಜನರಿಗೆ ಆಹಾರ ಧಾನ್ಯ ಪೂರೈಕೆ ಮಾಡಿದ್ದೇವೆ. ಪೌಷ್ಠಿಕ ಆಹಾರದ ಭದ್ರತೆ ನೀಡಿದ್ದೇವೆ. ಗರಿಬ್ ಕಲ್ಯಾಣ ಯೋಜನೆಯಡಿ 2 ಲಕ್ಷ ಕೋಟಿ ರೂ. ವ್ಯಯಿಸಿದ್ದೇವೆ. 2023ರಿಂದ ಇನ್ನು ಒಂದು ವರ್ಷ ಉಚಿತ ಆಹಾರ ಧಾನ್ಯ ನೀಡಲಿದ್ದೇವೆ ಎಂದು ಹೇಳಿದರು.
ದೇಶದಲ್ಲಿ 222 ಕೋಟಿ ಕೋವಿಡ್ ಲಸಿಕೆ ಡೋಸ್ ನೀಡಲಾಗಿದೆ. ಇದರಿಂದ 102 ಕೋಟಿ ಜನ ಪ್ರಯೋಜನ ಪಡೆದಿದ್ದಾರೆ ಎಂದ ನಿರ್ಮಲಾ ಸೀತಾರಾಮನ್, 9 ವರ್ಷಗಳಲ್ಲಿ ವಿಶ್ವದ 5ನೇ ಆರ್ಥಿಕ ಶಕ್ತಿಯಾಗಿ ಭಾರತ ಬೆಳೆದಿದೆ. 10ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದೆ. ತಂತ್ರಜ್ಞಾನ, ಜ್ಞಾನಾಧಾರಿತ ಆರ್ಥಿಕ ಶಕ್ತಿ ರೂಪಿಸುತ್ತೇವೆ ಎಂದು ತಿಳಿಸಿದರು.
ದೇಶದಲ್ಲಿ 11.7 ಲಕ್ಷ ಶೌಚಗೃಹಗಳನ್ನು ನಿರ್ಮಿಸಿದ್ದೇವೆ. 47 ಕೋಟಿ ಜನ್ಧನ್ ಖಾತೆಗಳನ್ನು ತೆರೆದಿದ್ದೇವೆ. ದೇಶದ ಜಿಡಿಪಿ ಅಂದಾಜಿ 7ರಷ್ಟು ಏರಿಕೆಯಾಗಿದೆ. ತಲಾವಾರು ಆದಾಯ 1.97 ಲಕ್ಷ ರೂ.ಗೆ ಏರಿಕೆಯಾಗಿದೆ. ಅಮೃತಕಾಲದಲ್ಲಿ ಮೊದಲ ಬಜೆಟ್ ಮಂಡನೆಯಾಗುತ್ತಿದೆ. ಮಹಿಳಾ ಸ್ವಸಹಾಯ ಸಂಘಗಳಿಗೆ ಹಲವು ರೀತಿಯಲ್ಲಿ ನೆರವಾಗಲು ಕ್ರಮಗಳನ್ನು ರೂಪಿಸಲಾಗುವುದು. ಕಚ್ಚಾವಸ್ತುಗಳ ಪೂರೈಕೆ, ಬ್ರಾಂಡಿಂಗ್ ಮತ್ತು ಸಿದ್ಧವಸ್ತುಗಳಿಗೆ ಮಾರುಕಟ್ಟೆ ರೂಪಿಸಲು ಸರ್ಕಾರ ನೆರವಾಗಲಿದೆ ಎಂದು ಸಚಿವರು ಭರವಸೆ ನೀಡಿದರು.
ಕೇಂದ್ರ ಬಜೆಟ್ಗೆ 7 ಆದ್ಯತೆಗಳಿವೆ ಎಂದು ವಿತ್ತ ಸಚಿವೆ ಘೋಷಿಸಿದರು. ಆ ಏಳು ಆದ್ಯತೆಗಳು ಯಾವುವೆಂದರೆ, ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ, ಅಂಚಿನಲ್ಲಿರುವವರಿಗೆ ಸವಲತ್ತು, ಮೂಲಸೌಕರ್ಯ, ಸಾಮರ್ಥ್ಯದ ಸದ್ಬಳಕೆ, ಪರಿಸರ ಸ್ನೇಹಿ ಅಭಿವೃದ್ಧಿ, ಯುವಶಕ್ತಿಗೆ ಉತ್ತೇಜನ, ಆರ್ಥಿಕ ಸುಧಾರಣೆ ಈ ಏಳು ಆದ್ಯತೆಗಳನ್ನು ಬಜೆಟ್ನಲ್ಲಿ ನೀಡಲಾಗಿದೆ ಎಂದರು.