ನವದೆಹಲಿ: ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ವ್ಯಕ್ತಿಗಳು ಚುನಾವಣೆಗೆ ನಿಲ್ಲುವುದನ್ನು ತಡೆಯಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಕೊನೇ ಅವಕಾಶ ನೀಡಿದೆ.
ವಕೀಲೆ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್ ಹಾಗೂ ಬಿ.ವಿ. ನಾಗರತ್ನ ಅವರಿದ್ದ ಪೀಠವು, 'ಇದೊಂದು ಗಂಭೀರ ವಿಷಯವಾಗಿದೆ. ಸಾಮಾನ್ಯ ಜನರು ಭ್ರಷ್ಟಾಚಾರದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಪರಾಧ ಪ್ರಕರಣ ಎದುರಿಸುತ್ತಿರುವ ವ್ಯಕ್ತಿಗಳು ಚುನಾವಣೆಗೆ ನಿಲ್ಲದಂತೆ ತಡೆಯಲು ಎಲ್ಲಾ ಹಂತದಲ್ಲೂ ಹೊಣೆಗಾರಿಕೆಯ ಅಗತ್ಯ ಇದೆ' ಎಂದು ಅಭಿಪ್ರಾಯಪಟ್ಟಿತು.
'ಈಗಾಗಲೇ ಬಂದಿದರುವ ಹಲವು ತೀರ್ಪುಗಳಲ್ಲಿ ಈ ಸಂಬಂಧ ಹಲವು ಅಂಶಗಳನ್ನು ಚರ್ಚಿಸಲಾಗಿದೆ. ಪ್ರತಿಕ್ರಿಯೆಯನ್ನು ಕೆಲವೇ ದಿನಗಳಲ್ಲಿ ಸಲ್ಲಿಸಲಾಗುವುದು' ಎಂದು ಕೇಂದ್ರ ಸರ್ಕಾರ ಹೇಳಿತು. 'ರಾಜಕೀಯ ಅಪರಾಧೀಕರಣದ ಬಗ್ಗೆ ನಾವು ಈಗಾಗಲೇ ಕಳವಳ ವ್ಯಕ್ತಪಡಿಸಿದ್ದೇವೆ. ಇದು ಸಂಸತ್ತಿನಲ್ಲಿ ಚರ್ಚೆಯಾಗಬೇಕಾದ ವಿಷಯವಾಗಿದೆ' ಎಂದು ಚುನಾವಣಾ ಆಯೋಗವು ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಿತು.
ಈ ಅರ್ಜಿಯ ಕುರಿತ ಅಂತಿಮ ವಿಚಾರಣೆಯನ್ನು ಏಪ್ರಿಲ್ 10ಕ್ಕೆ ನ್ಯಾಯಾಲಯವು ನಿಗದಿ ಮಾಡಿತು. ನ್ಯಾಯಾಲಯವು ಅರ್ಜಿಯ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ 2022ರ ಸೆ. 28ರಂದು ಕಾನೂನು ಸಚಿವಾಲಯ, ಗೃಹ ಸಚಿವಾಲಯ, ಚುನಾವಣಾ ಆಯೋಗಕ್ಕೆ ಹೇಳಿತ್ತು.