ಕಾಸರಗೋಡು: ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆಯುವ ಮೂಲಕ ಶಾಸಕ ಎನ್.ಎ.ನೆಲ್ಲಿಕುನ್ನು ಅವರು ಖಾಸಗಿ ಆಸ್ಪತ್ರೆಗಳ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ಸುಧೀರ್ ಆರೋಪಿಸಿದ್ದಾರೆ.
ಕಾಸರಗೋಡು ವಿಧಾನಸಭಾ ಕ್ಷೇತ್ರ ವ್ಯಪ್ತಿಯಲ್ಲಿ ಅಭಿವೃದ್ಧಿಕಾರ್ಯ ಕುಂಠಿತಗೊಂಡಿರುವುದರ ವಿರುದ್ಧ ಬಿಜೆಪಿ ಕಾಸರಗೋಡು ಮಂಡಲ ಸಮಿತಿ ವತಿಯಿಂದ ಶಾಸಕರ ಕಚೇರಿ ಎದುರು ನಡೆದ ಪ್ರತಿಭಟನಾ ಧರಣಿ ಉದ್ಘಾಟಿಸಿ ಮಾತನಾಡಿದರು.
ಕೇರಳದ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಕುಕ್ಯತಿಗೆ ಕಾರಣವಗಿರುವ ಕಾಸರಗೋಡಿನ ಎರಡು ವಿಧಾನಸಭಾ ಕ್ಷೇತ್ರಗಳಾದ ಕಾಸರಗೋಡು ಮತ್ತು ಮಂಜೇಶ್ವರದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ.ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ತೊಡಗಿ ಜಿಲ್ಲಾ, ಜನರಲ್ ಆಸ್ಪತ್ರೆಗಳಲ್ಲೂ ಉತ್ತಮ ಚಿಕಿತ್ಸಾ ಸೌಲಭ್ಯಗಳಿಲ್ಲ. ಹತ್ತು ವರ್ಷಗಳ ಹಿಂದೆ ಉಕ್ಕಿನಡ್ಕದಲ್ಲಿ ಕಾಮಗಾರಿ ಆರಂಭಿಸಿರುವ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕಾರ್ಯಾರಂಭ ಮಾಡಲು ಸಾಧ್ಯವಾಗಿಲ್ಲ. ಇದಕ್ಕೆ ಖಾಸಗಿ ಆಸ್ಪತ್ರೆಗಳ ಲಾಬಿಯೇ ಕಾರಣವಾಗಿದೆ. ಈ ಮಧ್ಯೆ ಕೋನ್ನಿ ಮತ್ತು ಪಾಲಕ್ಕಾಡ್ ವೈದ್ಯಕೀಯ ಕಾಲೇಜುಗಳು ಏಕಕಾಲದಲ್ಲಿ ಕಾರ್ಯನಿರ್ವಹಿಸಲಾರಂಭಿಸಿದೆ. ಜಿಲ್ಲೆಯ ಜನರು ಶಿಕ್ಷಣ ಮತ್ತು ಉತ್ತಮ ಚಿಕಿತ್ಸೆಗಾಗಿ ಬೇರೆ ರಾಜ್ಯಗಳನ್ನು ಅವಲಂಬಿಸಬೇಕಾಗಿರುವುದು ದೌರ್ಭಾಗ್ಯಕರ. ಉಭಯ ರಂಗಗಳು ಕಾಸರಗೋಡನ್ನು ಅವಗಣಿಸುತ್ತಾ ಬಂದಿರುವ ಪರಿಣಾಮ ಇಂದಿನ ದುಸ್ಥಿತಿಗೆ ಕಾರಣವಾಗಿರುವುದಾಗಿ ತಿಳಿಸಿದರು.
ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಪ್ರಮೀಳಾ ಮಜಲ್ ಅಧ್ಯಕ್ಷ ತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರ್, ಪ್ರಧಾನ ಕಾರ್ಯದರ್ಶಿ ಎ. ವೇಲಾಯುಧನ್, ಉಪಾಧ್ಯಕ್ಷರುಗಳಾದ ರಾಮಪ್ಪ ಮಂಜೇಶ್ವರ, ಎಂ. ಜನನಿ, ಕಾರ್ಯದರ್ಶಿಗಳಾದ ಮನುಲಾಲ್ ಮೇಲತ್, ಎನ್. ಮಧು, ಸೌಮ್ಯ ಮಹೇಶ್, ರಾಜ್ಯ ಸಮಿತಿ ಸದಸ್ಯೆ ಸವಿತಾ ಟೀಚರ್, ಜಿಲ್ಲ ಸಮಿತಿ ಸದಸ್ಯ ಶಿವಕೃಷ್ಣ ಭಟ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಧನಂಜಯನ ಮಧೂರು, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷ ಪುಷ್ಪಗೋಪಾಲನ್, ರಾಷ್ಟ್ರೀಯ ಸಮಿತಿ ಸದಸ್ಯೆ ಅಶ್ವನಿ.ಎಂ.ಎಲ್., ಎಸ್ ಸಿ.ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ಕೆ.ಕಯ್ಯಾರ್, ಜಿಲ್ಲಾಧ್ಯಕ್ಷ ಕೆ. ಸಂಪತ್ ಕುಮಾರ್, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ. ಈಶ್ವರ ಮಾಸ್ಟರ್, ಬದಿಯಡ್ಕ ಮಂಡ ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ ಸ್ವಾಗತಿಸಿದರು. ಕಾಸರಗೋಡು ಮಂಡಲ ಕಾರ್ಯದರ್ಶಿ ಸುಕುಮಾರ್ ಕುದುರೆಪ್ಪಾಡಿ ವಂದಿಸಿದರು.
ಖಾಸಗಿ ಆಸ್ಪತ್ರೆಗಳ ಏಜೆಂಟ್ ಆಗಿ ವರ್ತಿಸುತ್ತಿರುವ ಕಾಸರಗೋಡು ಶಾಸಕ: ಬಿಜೆಪಿ ಮುಖಮಡ ಪಿ.ಸುಧೀರ್ ಆರೋಪ
0
March 01, 2023
Tags