ನವದೆಹಲಿ: ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ವಿರೋಧ ಪಕ್ಷಗಳಲ್ಲಿ ಒಗ್ಗಟ್ಟು ಮೂಡಿಸುವ ತನ್ನ ಪ್ರಯತ್ನವನ್ನು ಕಾಂಗ್ರೆಸ್ ಮುಂದುವರಿಸಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಬುಧವಾರ ನಡೆದ ಸಭೆಯಲ್ಲಿ ಕಾಂಗ್ರೆಸ್ನ ಹಿರಿಯ ನಾಯಕ ರಾಹುಲ್ ಗಾಂಧಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಪಾಲ್ಗೊಂಡು, ಮುಂದಿನ ರಾಜಕೀಯ ನಡೆ ಹಾಗೂ ಕಾರ್ಯತಂತ್ರ ಕುರಿತು ಚರ್ಚಿಸಿದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, 'ಈ ಐತಿಹಾಸಿಕ ಸಭೆಯಲ್ಲಿ ಹಲವಾರು ಮಹತ್ವದ ವಿಷಯಗಳ ಕುರಿತು ಚರ್ಚಿಸಲಾಯಿತು. ಎಲ್ಲ ಪಕ್ಷಗಳ ಒಗ್ಗಟ್ಟು ಸಾಧಿಸುವ ಮೂಲಕ ಮುಂಬರುವ ಸಾರ್ವತ್ರಿಕ ಚುನಾವಣೆಗಳನ್ನು ಎದುರಿಸಲು ನಿರ್ಧರಿಸಲಾಯಿತು. ಈ ಗುರಿ ಸಾಧನೆಗಾಗಿ ಎಲ್ಲರೂ ಪಕ್ಷಗಳು ಶ್ರಮಿಸಲಿವೆ' ಎಂದರು.
ನಿತೀಶ್ಕುಮಾರ್ ಮಾತನಾಡಿ, 'ಈ ಮೈತ್ರಿಕೂಟದಲ್ಲಿ ಹೆಚ್ಚು ಹೆಚ್ಚು ಪಕ್ಷಗಳನ್ನು ಸೇರ್ಪಡೆಗೊಳಿಸಲು ಎಲ್ಲ ಪ್ರಯತ್ನಗಳನ್ನು ನಾವು ಮಾಡುತ್ತೇವೆ. ಒಗ್ಗಟ್ಟಿನಿಂದ ಬಿಜೆಪಿಯನ್ನು ಎದುರಿಸಬೇಕು ಎಂಬ ಬಗ್ಗೆ ಒಮ್ಮತ ಹೊಂದಿರುವವರೆಲ್ಲ ಒಟ್ಟಿಗೆ ಕುಳಿತು ಮಾತುಕತೆ ನಡೆಸುತ್ತೇವೆ. ಭವಿಷ್ಯದ ಕಾರ್ಯತಂತ್ರದ ಬಗ್ಗೆ ನಿರ್ಧರಿಸುತ್ತೇವೆ' ಎಂದರು.
'ಒಂದೆಡೆ ಸೇರಿದ ನಂತರ ಎಷ್ಟು ಪಕ್ಷಗಳು ನಮ್ಮೊಂದಿಗೆ ಬರಲಿವೆ ಎಂಬುದು ನಿಮಗೆ ಗೊತ್ತಾಗುತ್ತದೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಐತಿಹಾಸಿಕ ಹೆಜ್ಜೆ-ರಾಹುಲ್: ಖರ್ಗೆ ಅವರ ನಿವಾಸದಲ್ಲಿ ನಡೆದ ಕೆಲ ವಿರೋಧ ಪಕ್ಷಗಳ ನಾಯಕರೊಂದಿಗಿನ ಸಭೆಯನ್ನು ರಾಹುಲ್ ಗಾಂಧಿ 'ಐತಿಹಾಸಿಕ ಹೆಜ್ಜೆ' ಎಂದು ಬಣ್ಣಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಎಷ್ಟು ಪಕ್ಷಗಳು ಒಟ್ಟಾಗಿ ಹೋರಾಡಲು ಕೈಜೋಡಿಸಲಿವೆ ಎಂಬುದೇ ನಮ್ಮ ಮುಂದಿರುವ ಪ್ರಶ್ನೆ' ಎಂದರು.
'ವಿರೋಧ ಪಕ್ಷಗಳಲ್ಲಿ ಒಗ್ಗಟ್ಟು ಮೂಡಿಸುವ ಈ ಪ್ರಯತ್ನ ನಿರಂತರ ಪ್ರಕ್ರಿಯೆ. ದೇಶದ ಹಿತದೃಷ್ಟಿಯಿಂದ ವಿರೋಧಪಕ್ಷಗಳು ಹೊಂದಿರಬೇಕಾದ ಮುನ್ನೋಟ ಏನು ಎಂಬುದನ್ನು ನಾವು ರೂಪಿಸುತ್ತೇವೆ' ಎಂದರು.
'ದೇಶದಲ್ಲಿ ಈಗ ಸೈದ್ಧಾಂತಿಕ ಹೋರಾಟ ನಡೆಯುತ್ತಿದೆ. ಎಲ್ಲ ವಿರೋಧ ಪಕ್ಷಗಳು ಒಟ್ಟಾಗಿ ಈ ಹೋರಾಟದಲ್ಲಿ ಪಾಲ್ಗೊಳ್ಳುತ್ತೇವೆ. ದೇಶ ಹಾಗೂ ಸಂಸ್ಥೆಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಒಗ್ಗಟ್ಟಿನಿಂದ ಎದುರಿಸುತ್ತೇವೆ' ಎಂದೂ ರಾಹುಲ್ ಗಾಂಧಿ ಹೇಳಿದರು.
ಭಾಗಿ: ಖರ್ಗೆ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಸಲ್ಮಾನ್ ಖುರ್ಷೀದ್, ಮುಕುಲ್ ವಾಸ್ನಿಕ್, ಜೆಡಿಯುನ ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಲಲನ್ ಸಿಂಗ್, ಕಾಂಗ್ರೆಸ್ನ ಬಿಹಾರ ಘಟಕದ ಅಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್, ಆರ್ಜೆಡಿ ಸಂಸದ ಮನೋಜ್ ಝಾ ಇದ್ದರು.