ಹೈದರಾಬಾದ್: ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ಪಕ್ಷದ ಸಭೆಗೆ ನಾಯಕರನ್ನು ಸ್ವಾಗತಿಸಲು ಪಟಾಕಿ ಸಿಡಿಸಿದ ವೇಳೆ, ಕಿಡಿಗಳಿಂದಾಗಿ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ.
ಖಮ್ಮಮ್ ಜಿಲ್ಲೆಯ ಚೀಮಲಪಾಡುನಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಮೃತರು ಪಕ್ಷದ ಕಾರ್ಯಕರ್ತರು ಎಂದು ತೆಲಂಗಾಣದ ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.
ಸಂಸದ ನಮ ನಾಗೇಶ್ವರ ರಾವ್ ಮತ್ತು ಸ್ಥಳೀಯ ಶಾಸಕ ರಾಮುಲು ನಾಯ್ಕ್ ಅವರನ್ನು ಸಭೆಗೆ ಸ್ವಾಗತಿಸಲು ಕಾರ್ಯಕರ್ತರು ಪಟಾಕಿ ಸಿಡಿಸುತ್ತಿದ್ದರು. ಈ ವೇಳೆ ಪಟಾಕಿಯ ಕಿಡಿಗಳು ಸಮೀಪದಲ್ಲಿದ್ದ ಹುಲ್ಲಿನ ಗುಡಿಸಲ ಮೇಲೆ ಬಿದ್ದು ಬೆಂಕಿ ಆವರಿಸಿತ್ತು. ಹಲವರು ಓಡಿ ಬಂದು ಬೆಂಕಿ ಆರಿಸಲು ಯತ್ನಿಸಿದರು. ಈ ವೇಳೆ ಗುಡಿಸಲಿನ ಒಳಗಿದ್ದ ಅನಿಲ ಸಿಲಿಂಡರ್ ಸ್ಫೋಟಗೊಂಡಿತು. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಬಿಆರ್ಎಸ್ ಪರಮೋಚ್ಚ ನಾಯಕ ಮತ್ತು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು, ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿ, ದುರಂತಕ್ಕೆ ಕಂಬನಿ ಮಿಡಿದಿದ್ದಾರೆ.