ನವದೆಹಲಿ: ಅರುಣಾಚಲ ಪ್ರದೇಶಕ್ಕೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಭೇಟಿ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಚೀನಾದ ನಡೆಗೆ ತಿರುಗೇಟು ನೀಡಿರುವ ಭಾರತವು, ಅರುಣಾಚಲ ಪ್ರದೇಶವು ಹಿಂದೆಯೂ, ಇಂದೂ, ಮುಂದೆಯೂ ಹಾಗೂ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗವಾಗಿರಲಿದೆ ಎಂದು ಹೇಳಿದೆ.
ಶಾ ಅವರ ಭೇಟಿಗೆ ಚೀನಾವು ಕಾರಣವಿಲ್ಲದೆ ಆಕ್ಷೇಪ ಎತ್ತಿದೆ ಮತ್ತು ಇದರಿಂದ ವಾಸ್ತವ ಬದಲಾಗುವುದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಹೇಳಿದ್ದಾರೆ.
'ಚೀನಾದ ಅಧಿಕೃತ ವಕ್ತಾರರು ನೀಡಿರುವ ಹೇಳಿಕೆಯನ್ನು ನಾವು ಸಂಪೂರ್ಣವಾಗಿ ಅಲ್ಲಗಳೆಯುತ್ತೇವೆ. ಭಾರತದ ನಾಯಕರು ಇತರ ರಾಜ್ಯಗಳಿಗೆ ಭೇಟಿ ನೀಡಿದಂತೆ ಅರುಣಾಚಲ ಪ್ರದೇಶಕ್ಕೂ ಭೇಟಿ ನೀಡುತ್ತಾರೆ' ಎಂದಿದ್ದಾರೆ.
ಅರುಣಾಚಲ ಪ್ರದೇಶದ ಗಡಿ ಗ್ರಾಮವಾಗಿರುವ ಕಿಬಿಥೂಗೆ ಸೋಮವಾರ ಭೇಟಿ ನೀಡಿದ್ದ ಅಮಿತ್ ಶಾ ಅವರು, 'ಭಾರತದ ಪ್ರಾದೇಶಿಕ ಸಮಗ್ರತೆಯ ಮೇಲೆ ಕೆಟ್ಟ ದೃಷ್ಟಿ ಬೀರಲು ಮತ್ತು ನಮ್ಮ ದೇಶದ ಒಂದು ಅಂಗುಲ ನೆಲವನ್ನೂ ವಶಪಡಿಸಿಕೊಳ್ಳಲು ಯಾರೂ ಧೈರ್ಯ ತೋರಲಾರರು' ಎಂದಿದ್ದರು.
ಭಾರತದ ಗಡಿಯನ್ನು ಯಾರು ಬೇಕಾದರೂ ಅತಿಕ್ರಮಿಸಬಹುದು ಎಂಬ ಯುಗ ಕಳೆದಿದೆ ಎಂದೂ ಅವರು ಹೇಳಿದ್ದರು.