ಗುವಾಹಟಿ (PTI): 'ನ್ಯಾಯಾಂಗ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಅಳವಡಿಕೆಯಿಂದ ಈಶಾನ್ಯ ಭಾರತದಂತಹ ಪ್ರದೇಶಗಳ ನಾಗರಿಕರಿಗೆ ತ್ವರಿತವಾಗಿ ನ್ಯಾಯ ಒದಗಿಸಲು ಸಾಧ್ಯವಾಗಲಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಗುರುವಾರ ಇಲ್ಲಿ ನಡೆದ ಹೈಕೋರ್ಟ್ನ ಅಮೃತ ಮಹೋತ್ಸವದ ಸಮಾರೋಪದಲ್ಲಿ ಮಾತನಾಡಿದ ಅವರು, 'ಪರ್ಯಾಯ ವಿವಾದ ಪರಿಹಾರ ಕಾರ್ಯ ವ್ಯವಸ್ಥೆಯು ನ್ಯಾಯಾಂಗ ಕ್ಷೇತ್ರದ ಆಧಾರ ಸ್ತಂಭವಾಗಲಿದೆ.
ಕ್ಷಕಿದಾರರಿಗೆ ಸುಲಭವಾಗಿ ನ್ಯಾಯಾಂಗ ಸೇವೆ ಒದಗಿಸಲು ಕೃತಕ ಬುದ್ಧಿಮತ್ತೆ ಸೇವೆಯನ್ನೂ ಬಳಸಿಕೊಳ್ಳಬಹುದು' ಎಂದು ಅಭಿಪ್ರಾಯಪಟ್ಟರು.
ತಂತ್ರಜ್ಞಾನದ ಬಳಕೆಯಿಂದ ಜನರಿಗೆ ತ್ವರಿತವಾಗಿ ಸೇವೆ ಲಭಿಸುತ್ತದೆ ಎಂಬುದಕ್ಕೆ ಪ್ರಧಾನ ಮಂತ್ರಿ ಸ್ವಮಿತ್ವ ಯೋಜನೆಯೇ ನಿದರ್ಶನ. ಸ್ಥಿರಾಸ್ತಿಗಳ ಮಾಲೀಕತ್ವದ ಬಗ್ಗೆ ನಿಖರತೆ ಇಲ್ಲದೆ ಲಕ್ಷಾಂತರ ವಿವಾದಗಳು ನ್ಯಾಯಾಲಯದ ಮೆಟ್ಟಿಲೇರಿವೆ. ಇದು ನ್ಯಾಯಾಂಗ ವ್ಯವಸ್ಥೆಗೂ ಹೊರೆ. ಆದರೆ, ದೇಶದ 1 ಲಕ್ಷ ಗ್ರಾಮಗಳ ಜಮೀನಿನ ನಕ್ಷೆ ವಿವಾದಗಳನ್ನು ಬಗೆಹರಿಸಲು ಈ ಯೋಜನೆ ನೆರವಾಗಿದೆ. ಇದರಿಂದ ನ್ಯಾಯಾಲಯಗಳ ಮೇಲಿನ ಹೊರೆಯೂ ಕಡಿಮೆಯಾಗಿದೆ ಎಂದು ಹೇಳಿದರು.
ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಕೂಡಿರುವ ಈಶಾನ್ಯ ಭಾಗದ ಪ್ರದೇಶಗಳಿಗೆ ಪರ್ಯಾಯ ವಿವಾದ ಪರಿಹಾರ ಕಾರ್ಯ ವಿಧಾನ ವ್ಯವಸ್ಥೆ ವರದಾನವಾಗಿದೆ. ದೇಶದ ಕಾನೂನು ಕಾಲೇಜುಗಳಲ್ಲೂ ಈ ಬಗ್ಗೆ ಬೋಧನೆ ಮಾಡಬೇಕಿದೆ. ಕಾನೂನು ಸರಳ ಭಾಷೆಯಲ್ಲಿದ್ದರೆ ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುತ್ತದೆ ಎಂದು ಹೇಳಿದರು.