ನವದೆಹಲಿ: 'ಎಲ್ಲ ನ್ಯಾಯಾಲಯ ಹಾಗೂ ನ್ಯಾಯಮಂಡಳಿಗಳ ತೀರ್ಪು ಮತ್ತು ಆದೇಶಗಳ ಬರವಣಿಗೆ ಶೈಲಿಯು ಒಂದೇ ರೀತಿ ಇರಬೇಕು. ತೀರ್ಪು ಮತ್ತು ಆದೇಶಗಳ ಬರವಣಿಗೆಗಳು ಪ್ಯಾರಾ ರೂಪದಲ್ಲಿ ಇರಬೇಕು' ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
'ಈ ರೀತಿಯ ಬರವಣಿಗೆ ಶೈಲಿಯಿಂದ ತೀರ್ಪು ಮತ್ತು ಆದೇಶಗಳ ಓದು ಸುಲಭವಾಗುತ್ತದೆ. ಜೊತೆಗೆ ಅವುಗಳನ್ನು ಹುಡುಕಲು ಅನುಕೂಲವಾಗುತ್ತವೆ' ಎಂದೂ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
'ಪ್ಯಾರಾಗಳನ್ನು ಮಾಡುವುದರ ಜೊತೆಗೆ ಎಲ್ಲಾ ಪ್ಯಾರಾಗಳಿಗೂ ಕ್ರಮ ಸಂಖ್ಯೆಯನ್ನು ನೀಡಬೇಕು. ಈ ರೀತಿಯ ಬರವಣಿಗೆಯನ್ನು ಎಲ್ಲರೂ ಅಭ್ಯಾಸ ಮಾಡಿಕೊಳ್ಳಬೇಕು' ಎಂದು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಹಾಗೂ ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠವು ಹೇಳಿದೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ ತೀರ್ಪಿನ ಬರವಣಿಗೆಯು ಪ್ಯಾರಾ ರೂಪದಲ್ಲಿ ಇರಲಿಲ್ಲ ಎಂದು ದೂರಿ ಬಿ.ಎಸ್. ಹರಿ ಅವರು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮವವಿ ಸಲ್ಲಿಸಿದ್ದರು. ನ್ಯಾಯಾಲಯವು ಈ ಅರ್ಜಿಯ ವಿಚಾರಣೆಯನ್ನು ಗುರುವಾರ ನಡೆಸಿತು.
ಎಲ್ಲ ಹೈಕೋರ್ಟ್ಗಳ ರಿಜಿಸ್ಟ್ರಾರ್ ಜನರಲ್ಗಳಿಗೆ ಈ ಆದೇಶವನ್ನು ರವಾನೆ ಮಾಡಿ ಎಂದು ನ್ಯಾಯಾಲಯ ಹೇಳಿದೆ. ಆಯಾ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಅಧೀನ ನ್ಯಾಯಾಲಯಗಳು ಹಾಗೂ ನ್ಯಾಯಮಂಡಳಿಗಳಿಗೆ ಬರವಣಿಗೆ ಶೈಲಿಯ ಕುರಿತು ನಿರ್ದೇಶನ ನೀಡಬೇಕು ಎಂದೂ ಹೇಳಿದೆ.
ಶಕುಂತಲಾ ಶುಕ್ಲಾ ಮತ್ತು ಉತ್ತರ ಪ್ರದೇಶ ನಡುವಣ ಪ್ರಕರಣದಲ್ಲಿ (2021) ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಅಜಯ್ ಕುಮಾರ್ ಸೂದ್ (2022) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಈ ವೇಳೆ ನ್ಯಾಯಪೀಠವು ಉಲ್ಲೇಖಿಸಿತು.