ಶ್ರೀನಗರ: 'ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಕೊನೆಗೊಂಡಿಲ್ಲ, ಆದರೆ ಉಗ್ರರ ಸಂಖ್ಯೆಯು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ' ಎಂದು ಡಿಜಿಪಿ ದಿಲ್ಬಾಗ್ ಸಿಂಗ್ ಗುರುವಾರ ಹೇಳಿದ್ದಾರೆ.
ಉತ್ತರ ಕಾಶ್ಮೀರದ ಬಂಡಿಪೋರಾದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, 'ಸ್ಥಳೀಯ ಮತ್ತು ಪಾಕಿಸ್ತಾನದ ಉಗ್ರರ ಸಂಖ್ಯೆ ಇಲ್ಲಿ ಕಡಿಮೆಯಾಗುತ್ತಿದೆ.
ಭಯೋತ್ಪಾದನಾ ಕೃತ್ಯದಲ್ಲಿ ಒತ್ತಾಯಪೂರ್ವಕವಾಗಿ ತೊಡಗಿಸಿಕೊಂಡಿದ್ದ ಸ್ಥಳೀಯ ಯುವಕರು ಈಗ ಮುಖ್ಯವಾಹಿನಿಗೆ ಬರುತ್ತಿದ್ದಾರೆ' ಎಂದರು.
'ಭಯೋತ್ಪಾದನೆಯು ವಿನಾಶದ ಹಾದಿ ಎಂಬುದನ್ನು ಯುವಕರು ಮನಗಂಡಿದ್ದಾರೆ. ಈಗ ಅವರು ಕ್ರೀಡೆ ಹಾಗೂ ಶಿಕ್ಷಣದ ಹಾದಿಯಲ್ಲಿ ಸಾಗುತ್ತಿದ್ದಾರೆ' ಎಂದೂ ವಿವರಿಸಿದ್ದಾರೆ.
'ಭಯೋತ್ಪಾದನೆಯನ್ನು ಕೊನೆಗಾಣಿಸಲು ಪೊಲೀಸರು ಮತ್ತು ಭದ್ರತಾ ಪಡೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಅದನ್ನು ನಿಯಂತ್ರಣಕ್ಕೆ ತಂದಿವೆ' ಎಂದು ಶ್ಲಾಘಿಸಿದರು.
'ಉಗ್ರರು ಎ.ಕೆ.47 ರೈಫಲ್, ಪಿಸ್ತೂಲು, ಗ್ರೆನೇಡ್, ಮದ್ದುಗುಂಡುಗಳು ಮತ್ತು ಮಾದಕವಸ್ತುಗಳನ್ನು ಡ್ರೋನ್ಗಳ ಮೂಲಕ ಭಾರತದೊಳಕ್ಕೆ ಕಳುಹಿಸುತ್ತಿದ್ದಾರೆ. ಅವುಗಳನ್ನು ನಾವು ಹೊಡೆದುರುಳಿಸುತ್ತಿದ್ದೇವೆ. ಇಂತಹ ಪ್ರಕರಣಗಳು ಈಗ ಕಡಿಮೆಯಾಗುತ್ತಿವೆ' ಎಂದರು.