ನವದೆಹಲಿ: ಭಾರತೀಯ ಭೂಮಿಯನ್ನು ಯಾರೂ ಅತಿಕ್ರಮಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಚೀನಾಗೆ ತಿರುಗೇಟು ನೀಡಿದ್ದಾರೆ.
ಅಮಿತ್ ಶಾ ಆರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವುದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು.
ಚೀನಾ ಗಡಿ ಪ್ರದೇಶದ ಕಿಬಿಥೂ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಯಾರೂ ಕೂಡ ಭಾರತದ ಸೂಜಿ ಮೊನೆಯಷ್ಟು ಭೂಮಿಯನ್ನು ಅತಿಕ್ರಮಿಸಲು ಸಾಧ್ಯವಿಲ್ಲ ಎಂದರು.
ಇದೇ ವೇಳೆ ಐಟಿಬಿಪಿ ಹಾಗೂ ಸೇನಾ ಸಿಬ್ಬಂದಿ ಶೌರ್ಯವನ್ನು ಶ್ಲಾಘಿಸಿದ ಅಮಿತ್ ಶಾ, ಯಾರೂ ಭಾರತದ ಮೇಲೆ ಕೆಟ್ಟ ಕಣ್ಣು ಹಾಕಲು ಸಾಧ್ಯವಿಲ್ಲ ಎಂದು ಚೀನಾಗೆ ತಿರುಗೇಟು ನೀಡಿದರು.
ಇಡೀ ದೇಶ ತಮ್ಮ ಮನೆಗಳಲ್ಲಿ ಶಾಂತಿಯುತವಾಗಿ ಮಲಗಿದೆ ಎಂದರೆ ನಮ್ಮ ಐಟಿಬಿಪಿ ಯೋಧರ ಶ್ರಮದಿಂದಾಗಿ ಎಂದರು. ಯೋಧರು ನಮ್ಮ ಗಡಿಯಲ್ಲಿ ಹಗಲು ರಾತ್ರಿ ಕೆಲಸ ಮಾಡುತ್ತಿರುವುದರಿಂದ ನಾವು ನೆಮ್ಮದಿಯಿಂದ ಇದ್ದೇವೆ. ನಮ್ಮ ಯೋಧರು ಇರುವಾಗ ನಮ್ಮ ಮೇಲೆ ಕೆಟ್ಟ ಕಣ್ಣು ಹಾಕುವ ಧೈರ್ಯ ಯಾರಿಗೂ ಇಲ್ಲ ಎಂದು ಹೇಳಿದರು.
ಅರುಣಾಚಲದಲ್ಲಿ ಅಮಿತ್ ಶಾ ಅವರು ಅಭಿವೃದ್ಧಿ ಚಟುವಟಿಕೆಗಳಿಗೆ ಚಾಲನೆ ನೀಡಿರುವುದು ಚೀನಾದ ಪ್ರಾದೇಶಿಕ ಸಾರ್ವಭೌಮತ್ವವನ್ನು ಉಲ್ಲಂಘಿಸುತ್ತದೆ. ಇದು ಗಡಿ ಪರಿಸ್ಥಿತಿಯ ಶಾಂತಿ ಮತ್ತು ನೆಮ್ಮದಿ ಕದಡುವ ಸಾಧ್ಯತೆ ಇದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಹೇಳಿದ್ದರು.
ಈ ಬೆನ್ನಲೇ ಅಮಿತ್ ಶಾ ಭಾರತೀಯ ಭೂಮಿಯನ್ನು ಯಾರೂ ಅತಿಕ್ರಮಿಸಲು ಸಾಧ್ಯವಿಲ್ಲ ಎಂದು ಚೀನಾಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಗಡಿ ರಾಜ್ಯಗಳಲ್ಲಿ ರಸ್ತೆ ಸಂಪರ್ಕ ಸಾಧಿಸಲು ಕೇಂದ್ರ ಸರ್ಕಾರ ₹ 4,800 ಕೋಟಿ ತೆಗೆದಿರಿಸಿದ್ದು, ಅದರ ಭಾಗವಾಗಿ ಗಡಿ ಪ್ರದೇಶದಲ್ಲಿ ಹಮ್ಮಿಕೊಂಡಿರುವ ಅಭಿವೃದ್ಧಿ ಯೋಜನೆಗೆ ಸಚಿವರು ಚಾಲನೆ ನೀಡಿದ್ದಾರೆ. ಈ ಯೋಜನೆಯಂತೆ ಉತ್ತರ ಭಾರತದ 19 ಜಿಲ್ಲೆಗಳ 2,967 ಹಳ್ಳಿಗಳಲ್ಲಿ ರಸ್ತೆ ಸಂಪರ್ಕ ಕಲ್ಪಿಸಲಾಗುತ್ತದೆ.