ಉಪ್ಪಳ : ಕಲಾಗಂಗೋತ್ರಿ ಯಕ್ಷಗಾನ ಕೇಂದ್ರ ಸೋಮೇಶ್ವರ ಸಂಸ್ಥೆಯ ಸುವರ್ಣ ಮಹೋತ್ಸವ ಸರಣಿ ಕಾರ್ಯಕ್ರಮದ ಭಾಗವಾಗಿ ಯಕ್ಷಬಳಗ ಹೊಸಂಗಡಿ ಇವರ ಸಹಯೋಗದಲ್ಲಿ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಕೀರ್ತಿಶೇಷ ಕಲಾವಿದರ ಸಂಸ್ಮರಣೆ ಹಾಗೂ ತಾಳಮದ್ದಳೆ ಇತ್ತೀಚೆಗೆ ಜರಗಿತು.
ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ನಿಕಟಪೂರ್ವ ಅಧ್ಯಕ್ಷ ಶಂಕರ ರೈ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ವರ್ಕಾಡಿ ನಾರಾಯಣಗುರು ಯಕ್ಷಗಾನ ಕಲಾಮಂಡಳಿ ಅಧ್ಯಕ್ಷ ನಾರಾಯಣ ಪೂಜಾರಿ ಬೆಜ್ಜಂಗಳ ಭಾಗವಹಿಸಿದ್ದರು.
ಉಪ್ಪಳ ಕೃಷ್ಣಮಾಸ್ತರ ಬಗ್ಗೆ ಕಲಾಗಂಗೋತ್ರಿಯ ಕೆ.ಸದಾಶಿವ, ಕುಂಬಳೆ ಶೇಷಪ್ಪರ ಬಗ್ಗೆ ಶಿಕ್ಷಕ ರಾಜಾರಾಮ ರಾವ್ ಮೀಯಪದವು ಸಂಸ್ಮರಣಾ ನುಡಿಗಳನ್ನಾಡಿದರು. ಕಲಾಗಂಗೋತ್ರಿಯ ಹಿರಿಯ ಸದಸ್ಯ ಬಾಬು ಕೋಟೆಕಾರ್ ಉಪಸ್ಥಿತರಿದ್ದರು.
ಯಕ್ಷಬಳಗದ ಸಂಚಾಲಕ ಸತೀಶ ಅಡಪ ಸಂಕಬೈಲು ಕಾರ್ಯಕ್ರಮ ನಿರ್ವಹಿಸಿದರು. ನಾಗರಾಜ ಪದಕಣ್ಣಾಯ ಮೂಡಂಬೈಲು ವಂದಿಸಿದರು. ಬಳಿಕ ಯಕ್ಷಗಾನ ತಾಳಮದ್ದಳೆ ‘ಕೃಷ್ಣ ಸಂಧಾನ’ ಜರಗಿತು.